ಹೊಸದಿಗಂತ ವರದಿ ಅಂಕೋಲಾ:
ಸುಮಾರು ನೂರು ವರ್ಷಗಳ ಹಿಂದೆ ವೃತ್ತಿಪರ ಮೇಳವಾಗಿ ಹುಟ್ಟಿ ಜಿಲ್ಲೆಯ ಯಕ್ಷರಂಗಕ್ಕೆ ಮಹತ್ವದ ಕೊಡುಗೆ ನೀಡಿರುವ ಅಂಕೋಲಾ ತಾಲೂಕಿನ ಬಾಸಗೋಡದ ಸುಭೋಧ ಯಕ್ಷಗಾನ ಮಂಡಳಿಯ ಶತಮಾನೋತ್ಸವದ ಸವಿನೆನಪಿಗಾಗಿ ಡಿಸೆಂಬರ್ 24 ರಿಂದ ಡಿಸೆಂಬರ್ 30 ರ ವರೆಗೆ ಸುಭೋಧ ಯಕ್ಷ ಸಪ್ತಾಹ ಕಾರ್ಯಕ್ರಮ ಬಾಸಗೋಡದ ನಡುಬೇಣದಲ್ಲಿ ನಡೆಯಲಿದ್ದು ಶತಮಾನೋತ್ಸವ ಸಮಿತಿ ಸಂಚಾಲಕ ನ್ಯಾಯವಾದಿ ನಾಗರಾಜ ನಾಯಕ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜನತಾ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯಕ್ಷ ಸಪ್ತಾಹದ ಸಂಚಾಲಕ ನಾಗರಾಜ ನಾಯಕ ಮಾತನಾಡಿ ಒಂದು ಶತಮಾನದ ಹಿಂದೆ ಒಂದು ಮೇಳವನ್ನು ಕಟ್ಟಿ ತಾಲೂಕಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರನ್ನು ಸೇರಿಸಿಕೊಂಡು ಯಕ್ಷಗಾನ ಪ್ರದರ್ಶನ ನೀಡಿರುವ ಹಿರಿಮೆ ಸುಭೋಧ ಯಕ್ಷಗಾನ ಮಂಡಳಿಯದಾಗಿದ್ದು ಹಾಡುಗಾರಿಕೆ ಕುಣಿತ, ಅರ್ಥಗಾರಿಕೆ ಹೀಗೆ ಎಲ್ಲಾ ವಿಭಾಗಗಳಲ್ಲಿ ಸಮರ್ಥ ತಂಡ ಎನಿಸಿಕೊಂಡು ಯಕ್ಷಗಾನದ ಹೆಸರಾಂತ ಕಲಾವಿದರನ್ನು ಹೊಂದಿರುವ ಸಾಮಗ ಕುಟುಂಬದ ಹಿರಿಯರು ಸುಭೋಧ ಯಕ್ಷಗಾನ ಮಂಡಳಿಯಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದು ತಿಳಿಸಿದರು.
ಶತಮಾನೋತ್ಸವದ ಅಂಗವಾಗಿ ಏಳು ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಗೆ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು ಹಿಮ್ಮೇಳ,ಮುಮ್ಮೇಳ ಪ್ರಸಾದನ, ಧ್ವನಿವರ್ಧಕ ಕಲಾವಿದರು ಯಕ್ಷಗಾನ ಸಂಘಟಕರನ್ನು ಗುರುತಿಸಿ ಗೌರವಿಸಲಾಗುವುದು.ಯಕ್ಷಗಾನದ ಹಳೆಯ ಪ್ರಸಂಗಗಳು ಸೇರಿದಂತೆ ಎಲ್ಲಾ ಪ್ರಸಂಗಗಳ ಪುಸ್ತಕಗಳು ಮತ್ತು ಯಕ್ಷಗಾನದ ಕುರಿತು ಜ್ಞಾನ ಹೆಚ್ಚಿಸುವ ಪುಸ್ತಕಗಳನ್ನು ಒಳಗೊಂಡ ಯಕ್ಷಗಾನ ಗ್ರಂಥಾಲಯದ ಸ್ಥಾಪನೆ, ಅಂಕೋಲಾ ಸುತ್ತ ಮುತ್ತಲಿನ ಯಕ್ಷಗಾನ ಆಸಕ್ತ ಮಕ್ಕಳಿಗಾಗಿ ಕಲಿಕಾ ಕೇಂದ್ರದ ಮೂಲಕ ಉಚಿತ ಯಕ್ಷಗಾನ ತರಬೇತಿ ಮೊದಲಾದ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುಭೋಧ ಯಕ್ಷಗಾನ ಮಂಡಳಿ ಶತಮಾನೋತ್ಸವ ಸಮಿತಿ ಸದಸ್ಯ ವಿನೋದ ನಾಯಕ ಮಾತನಾಡಿದರು.
ರಜತ ನಾಯಕ ಸ್ವಾಗತಿಸಿದರು. ಹೊನ್ನಪ್ಪ ನಾಯಕ,ತಿಮ್ಮಣ್ಣ ಸುಬ್ರಾಯ ನಾಯಕ, ರಜತ ನಾಯಕ,ಸದಾನಂದ ನಾಯಕ, ಗುರುಪ್ರಸಾದನಾಯಕ, ಗೋಕುಲ ನಾಯಕ,ಬಾಲಚಂದ್ರ ನಾಯಕ, ರಮೇಶ್ ನಾಯಕ, ಪ್ರಕಾಶ ನಾಯಕ ,ವೈಭವ ನಾಯಕ ಮಧುಕರ ನಾಯಕ,ಮಂಜುನಾಥ ನಾಯಕ ನಾಯಕ,ಅಕ್ಷಯ ಗಾಂವಕರ ಉಪಸ್ಥಿತರಿದ್ದರು.
ಡಿಸೆಂಬರ್ 24ರಂದು ಉದ್ಘಾಟನೆ 30ರಂದು ಸಮಾರೋಪ
ಸುಭೋಧ ಯಕ್ಷಗಾನ ಮಂಡಳಿಯ ಶತಮಾನೋತ್ಸವ ಸಮಾರಂಭದ ಉದ್ಘಾಟನೆ ಡಿಸೆಂಬರ್ 24 ರಂದು ಸಂಜೆ 6 ಗಂಟೆಗೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಅಧ್ಯಕ್ಷತೆ ವಹಿಸಲಿದ್ದು ಶಾಸಕಿ ರೂಪಾಲಿ ನಾಯ್ಕ ಯಕ್ಷಗಾನ ಗ್ರಂಥಾಲಯ ಉದ್ಘಾಟಿಸಲಿದ್ದಾರೆ.
ವಿಶೇಷ ಆಮಂತ್ರಿತರಾಗಿ ಯಕ್ಷಗಾನ ವಿದ್ವಾಂಸ ಕೆರೆಮನೆ ಶಿವಾನಂದ ಹೆಗಡೆ,ಹಿರಿಯ ವಕೀಲ ಪ್ರದೀಪ ನಾಯಕ, ಗ್ರಾ.ಪಂ ಸದಸ್ಯ ಲಕ್ಷ್ಮೀಧರ ನಾಯಕ, ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ, ಮೋಹನದಾಸ ನಾಯಕ ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 30 ರಂದು ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ವಹಿಸಲಿದ್ದು ಉದ್ಯಮಿ ಮಂಜುನಾಥ ನಾಯಕ, ನಾಗರಾಜ ಹಿತ್ತಲಮಕ್ಕಿ, ಮಾಜಿ ಶಾಸಕ ಸತೀಶ ಸೈಲ್, ನಾಟಿ ವೈದ್ಯ ಹನುಮಂತ ಗೌಡ, ಡಾ.ಲತಾ ನಾಯಕ, ಶಿಕ್ಷಕಿ ರಾಜಮ್ಮ ಹಿಚ್ಕಡ ಪಾಲ್ಗೊಳಲಿದ್ದಾರೆ.