ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಪ್ರತಿಷ್ಠಿತ ಆಭರಣ ಅಂಗಡಿ ವ್ಯಾಪಾರಿ ಸ್ವಂತ ಮಗನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಗರದ ಕೇಶ್ವಾಪುರದ ಅರಿಹಂತ ನಗರದ ಉದ್ಯಮಿ ಅಖಿಲ್ ಮಹಾಜನ ಶೇಟ್ (26) ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ತಂದೆಯೇ ಸುಪಾರಿ ಕೊಟ್ಟು ಪುತ್ರನನ್ನು ಅವರನ್ನು ಕೊಲೆ ಮಾಡಿಸಿರುವುದು ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕೇಶ್ವಾಪುರ ಠಾಣೆ ಪೊಲೀಸರು ಮತ ಅಖಿಲ್ ಅವರ ತಂದೆ ಹಾಗೂ ಚಿನ್ನಾಭರಣ ಅಂಗಡಿ ಮಾಲೀಕ ಭರತ ಮಹಾಜನ ಶೇಟ್, ವೀರಾಪುರ ಓಣಿಯ ಮಹಾದೇವ ನಾಲವಾಡ, ನೂರಾನಿ ಪ್ಲಾಟ್ ನ ಸಲೀಂ ಸಲಾವುದ್ದೀನ್ ಮೌಲ್ವಿ, ರೆಹಮಾನ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.
ದುಶ್ಚಟಗಳ ದಾಸನಾಗಿದ್ದ ಅಖಿಲ್, ನಿತ್ಯ ಮದ್ಯ ಕುಡಿದುಕೊಂಡು ತಡರಾತ್ರಿ ಮನೆಗೆ ಬರುತ್ತಿದ್ದ. ತಂದೆ ಮತ್ತು ತಾಯಿ ಜೊತೆ ಜಗಳವಾಡಿ ಹಲ್ಲೆ ನಡೆಸುತ್ತಿದ್ದ. ಕೊಲೆ ಮಾಡುವುದಾಗಿ ತಂದೆಯನ್ನು ಬೆದರಿಸಿದ್ದ. ಇದರಿಂದಾಗಿ, ಪುತ್ರನ ಕೊಲೆಗೆ ಭರತ ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.