ಹೊಸದಿಗಂತ ವರದಿ ಯಲ್ಲಾಪುರ:
ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆಗೆ ತುಡುಗುಣಿ ಹೊಳೆಯ ಪಕ್ಕದಲ್ಲಿ ಮತ್ತೆ ಕುಸಿತ ಸಂಭವಿಸಿದೆ.ಕಳೆದ ವರ್ಷ ಸುರಿದ ಭಾರೀ ಮಳೆಗೆ ಇದೇ ಸ್ಥಳದಲ್ಲಿ ರಸ್ತೆ ಕುಸಿತವಾಗಿತ್ತು. ಆಗ ಮರಳಿನ ಚೀಲಗಳನ್ನು ಪೇರಿಸಿ ತಾಕ್ಕಾಲಿಕವಾಗಿ ಸರಿಪಡಿಸಲಾಗಿತ್ತು.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳಗೆ ಮರಳಿನ ಚೀಲಗಳು ಜಾರಿ ಹೋಗಿ ರಸ್ತೆ ಮತ್ತೆ ಕುಸಿತಗೊಂಡಿದೆ. ಹಾಗಾಗಿ ಸೂರಿಮನೆ ಭಾಗದ ಊರುಗಳಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದ್ದು ಊರಿನ ಜನರು ಕಳವಳ ವ್ಯಕ್ತಪಡಿಸಿದ್ಧಾರೆ.
ಸುದ್ದಿ ತಿಳಿದ ತಕ್ಷಣ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತುಡುಗುಣಿಯಿಂದ ಸೂರಿಮನೆಗೆ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದರು.ಜನರಿಗೆ ತೊಂದರೆಯಾಗದಂತೆ ಕೂಡಲೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪರ್ಕ ಕಡಿತ ವಾಗುವ ಆತಂಕ :
ಹಾಗೇನಾದರೂ ಆದರೆ ಮಳೆಗಾಲದಲ್ಲಿ ಹೊರಗಿನ ಊರುಗಳ ಸಂಪರ್ಕ ಕಡಿತವಾಗಿ ಪರಿತಪಿಸಬೇಕಾದ ಆತಂಕದ ಪರಿಸ್ಥಿತಿಯಲ್ಲಿ ಸೂರಿಮನೆ ಊರಿನ ನಾಗರೀಕರು ಬದುಕುವಂತಾಗಿದೆ. ಇತ್ತೀಚೆಗಷ್ಟೇ ತುಡುಗುಣಿಯಿಂದ ಸೂರಿಮನೆಗೆ ಸಿಮೆಂಟ್ ರಸ್ತೆ ಮಂಜೂರಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಕೆಲಸದ ಪ್ರಾರಂಭಕ್ಕೆ ಮಳೆಗಾಲ ಮುಗಿಯುವ ವರೆಗೆ ಕಾಯುವುದು ಅನಿವಾರ್ಯವೆಂದು ಹೇಳಲಾಗುತ್ತಿದೆ.
ಉಮ್ಮಚ್ಗಿ ಗ್ರಾ.ಪಂ.ನ ಸದಸ್ಯರುಗಳಾದ ಖೈತಾನ್ ಡಿಸೋಜ ಮತ್ತು ಅಶೋಕ ಪೂಜಾರಿ, ಗ. ರಾ ಭಟ್ ಉಪಸ್ಥಿತರಿದ್ದರು.