ಹೊಸದಿಗಂತ ಡಿಜಿಟಲ್ ಡೆಸ್ಕ್
ವಧುವಿನ ಕಡೆಯವರು ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ವರ ವಧುವಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ನ ಖೋಡಾ ಪ್ರದೇಶದಲ್ಲಿ ನಡೆದಿದೆ.
ಎಐಟಿ ಕಾಲೇಜಿನಲ್ಲಿ ಬಿ-ಟೆಕ್ ಎಂಜಿನಿಯರಿಂಗ್ ಪದವಿಧರ ಯುವತಿಗೆ ಗಾಜಿಪುರದ ಅಫ್ಜಲ್ಪುರದ ಮೊಹಮ್ಮದ್ ದಿಲ್ಶಾದ್ ಎಂಬುವವರ ಕುಟುಂಬದಿಂದ ಒಂದು ಸಂಬಂಧ ಬಂದಿತು. ಮಾತುಕತೆ ಬಳಿಕ ಸಂಬಂಧ ನಿಶ್ಚಯವಾಗಿ ಮದುವೆಗೆ ನಿರ್ಣಯಿಸಲಾಯಿತು. ಆ ಬಳಿಕ ವರನ ಕುಟುಂಬವು ವರದಕ್ಷಿಣೆಗೆ ಬೇಡಿಕೆ ಇಡಲಾರಂಭಿಸಿತು. ವರದಕ್ಷಿಣೆಯಾಗಿ ಕಾರು, 2 ಲಕ್ಷ ರೂಪಾಯಿ ಮತ್ತು ಚಿನ್ನಾಭರಣಗಳನ್ನು ನೀಡಿದರೆ ಮಾತ್ರ ಮಾದುವೆ ಎಂದು ಹೇಳಿದ್ದಾರೆ. ಆದರೆ ಹುಡುಗಿಯ ತಂದೆ ಮಾತ್ರ ವರದಕ್ಷಿಣೆ ನೀಡಲು ಒಪ್ಪಿಲ್ಲ. ಜತೆಗೆ ವರದಕ್ಷಿಣೆ ಕೇಳುವುದಾದರೆ ಹುಡುಗಿಯನ್ನು ನೀಡಲೂ ನಿರಾಕರಿಸಿದ್ದಾರೆ. ಆದರೆ ಕೆಲವು ದಿನಗಳ ನಂತರ ದಿಲ್ಶಾದ್ ಕುಟುಂಬಸ್ಥರು ಮತ್ತೆ ಬಂದು ವರದಕ್ಷಿಣೆ ಇಲ್ಲದೆ ಮದುವೆಯಾಗಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಹುಡುಗಿ ಮದುವೆಯಾಗಿ ಮನೆಗೆ ಕಾಲಿಟ್ಟ ದಿನವೇ ವರನ ಕುಟುಂಬ ತನ್ನ ವರಸೆಯನ್ನು ತೋರಿದೆ. ಮದುವೆಯಾದ ಮರುದಿನವೇ ದಿಲ್ಶಾದ್ ಮತ್ತವನ ಕುಟುಂಬ ವರದಕ್ಷಿಣೆಗೆ ಒತ್ತಾಯಿಸಿ ಆಕೆಯನ್ನು ಥಳಿಸಿದ್ದಾರೆ.
ವರದಕ್ಷಿಣೆ ತರುವವರೆಗೂ ಮನೆಗೆ ಬರೆಬೇಡ ಎಂದು ಆಕೆಯನ್ನು ತವರಿಗೆ ಅಟ್ಟಿದ್ದಾನೆ. ಆ ಬಳಿಕ ಆಕೆಗೆ ವಾಟ್ಸಾಪ್ ಮೂಲಕ ʼಮೂರು ಬಾರಿ ತಲಾಖ್ ಹೇಳಿʼ ವಿಚ್ಛೇದನ ನೀಡಿದ್ದಾಗಿ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಕುಟುಂಬವು ವರ ಮೊಹಮ್ಮದ್ ದಿಲ್ಶಾದ್, ರಶೀದನ್ ನಿಶಾ, ರೇಷ್ಮಾ, ನಸ್ರುದ್ದೀನ್ ಮತ್ತು ರೋಶ್ನಿ ವಿರುದ್ಧ ಪ್ರಕರಣ ದಾಖಲಿಸಿದೆ. ಇದೀಗ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ