RCB ಬಗ್ಗೆ ಕೆಟ್ಟದಾಗಿ ಮಾತನಾಡಿದ ಮುಂಬೈ ಅಭಿಮಾನಿಯನ್ನು ಕೊಂದುಹಾಕಿದ ಆರ್‌ಸಿಬಿ ಅಭಿಮಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕುಡಿದ ಮತ್ತಿನಲ್ಲಿ ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂದು ಸಿಟ್ಟಿಗೆದ್ದ ಆರ್‌ ಸಿಬಿ ಅಭಿಮಾನಿ ಬಾಟಲಿ ಹಾಗೂ ಬ್ಯಾಟ್‌ ನಿಂದ ಮುಂಬೈ ಇಂಡಿಯನ್ಸ್‌ ಫ್ಯಾನ್‌ ತಲೆಗೆ ಹೊಡೆದು ಆತನನ್ನು ಹತ್ಯೆಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೃತ ಅಭಿಮಾನಿಯನ್ನು ಪಿ ವಿಘ್ನೇಶ್ (24) ಮತ್ತು ಆರೋಪಿಯನ್ನು ಎಸ್. ಧರ್ಮರಾಜ್ (21) ಎಂದು ಗುರುತಿಸಲಾಗಿದೆ. ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದ ಸ್ನೇಹಿತರಾದ ಇಬ್ಬರೂ ಕಟ್ಟಾ ಕ್ರಿಕೆಟ್ ಅಭಿಮಾನಿಗಳು. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಾಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೀಲಪಾಲೂರು ಪೊಲೀಸರ ಪ್ರಕಾರ, ರೋಹಿತ್ ಶರ್ಮಾ ಅಭಿಮಾನಿ ವಿಘ್ನೇಶ್ ಮತ್ತು ವಿರಾಟ್ ಕೊಹ್ಲಿ ಬೆಂಬಲಿಗ ಧರ್ಮರಾಜ್ ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ತೆರೆದ ಪ್ರದೇಶದಲ್ಲಿ ಕುಡಿಯುತ್ತ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು.
ವಿಘ್ನೇಶ್ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರೋಹಿತ್‌ ಶರ್ಮಾರ ದೊಡ್ಡ ಅಭಿಮಾನಿಯಾಗಿದ್ದ. ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ವಿರಾಟ್‌ ಕೊಹ್ಲಿಯ ಕಟ್ಟಾ ಬೆಂಬಲಿಗನಾಗಿದ್ದ. ಮಾತನಾಡುತ್ತಿದ್ದ ವೇಳೆ ಅವರ ನಡುವೆ, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಕ್ರಿಕೆಟಿಗ ಎಂಬ ಚರ್ಚೆ ಬಂದಿದೆ. ಈ ವೇಳೆ ವಿಘ್ನೇಶ್ ಆರ್‌ಸಿಬಿಯನ್ನು ಗೇಲಿ ಮಾಡಿ ಕೊಹ್ಲಿಯನ್ನು ಅಣಕಿಸಿದ್ದಾನೆ. ಇದರಿಂದ ಕುಪಿತಗೊಂಡ ಧರ್ಮರಾಜ್ ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಆ ಬಳಿಕ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುದಿನ ಬೆಳಗ್ಗೆ ಸಿಡ್ಕೊ ಕಾರ್ಖಾನೆಗೆ ತೆರಳುತ್ತಿದ್ದ ಕಾರ್ಮಿಕರ ಗುಂಪೊಂದು ವಿಘ್ನೇಶ್ ಶವವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಘ್ನೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಿಯಲೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಎಸ್. ಧರ್ಮರಾಜ್ ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!