ಹೊಸದಿಗಂತ ವರದಿ,ಅಂಕೋಲಾ:
ಬೆಲ್ಲದ ತ್ಯಾಜ್ಯ ಮಲಾಸಿಸ್ ತುಂಬಿ ಸಾಗುತ್ತಿದ್ದ ಟ್ಯಾಂಕರ್ ಲಾರಿ ರಾಮನಗುಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಟ್ಯಾಂಕರ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆಯಿಂದ ಬ್ರೇಕ್ ಹಾಕಿದಾಗ ಟ್ಯಾಂಕ್ ಒಳಗಡೆ ಇದ್ದ ತ್ಯಾಜ್ಯ ತುಳುಕಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ.
ಟ್ಯಾಂಕರ್ ನಲ್ಲಿ ತುಂಬಿದ್ದ ಕಾಕಂಬಿ ದ್ರಾವಣ ರಸ್ತೆಯ ಮೇಲೆ ಹರಿದು ಅಕ್ಕ ಪಕ್ಕದ ಹೊಲ ಗದ್ದೆಗಳಿಗೆ ಸೇರುತ್ತಿರುವುದು ಕಂಡು ಬಂದಿದೆ.
ಟ್ಯಾಂಕರ್ ಲಾರಿ ಹುಬ್ಬಳ್ಳಿ ಕಡೆಯಿಂದ ಕಾರವಾರ ಕಡೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.