ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣದವರು ಶಿವಸೇನೆ ಪಕ್ಷ ತಮ್ಮದು ಎಂದು ಸಾಬೀತುಪಡಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಎರಡೂ ಬಣದವರು ಶಿವಸೇನೆ ತಮಗೆ ಸೇರಿದ್ದು ಎಂದು ಪ್ರಬಲವಾದ ಸಮರ್ಥನೆಯನ್ನು ನೀಡಲು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರಗಳನ್ನು ಸಲ್ಲಿಸಬೇಕಾಗಿದೆ.
ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಅವರಿಗೆ ಆಗಸ್ಟ್ 8 ರೊಳಗೆ ಅಗತ್ಯ ದಾಖಲೆ ಪತ್ರ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೇ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಇಬ್ಬರೂ ಲಿಖಿತ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ.
ಇದರ ನಡುವೆಯೇ ಏಕನಾಥ್ ಶಿಂಧೆ ಈಗಾಗಲೇ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ 40 ಶಾಸಕರು ಮತ್ತು 12 ಸಂಸದರ ಬೆಂಬಲವನ್ನು ತಾವು ಹೊಂದಿರುವುದಾಗಿ ವಿವರಣೆ ನೀಡಿದ್ದಾರೆ. ಶಿವಸೇನೆ ಇಬ್ಭಾಗವಾಗಿದೆ ಮತ್ತು ಪಕ್ಷ ತಮ್ಮದು ಅದರ ಅಧ್ಯಕ್ಷರು ನಾನು, ನಾನು ಎಂದು ಇಬ್ಬರು ನಾಯಕರೂ ಹೇಳುತ್ತಿದ್ದಾರೆ ಎಂದು ಚುನಾವಣಾ ಆಯೋಗ ಎರಡು ಬಣಗಳಿಗೆ ನೀಡಲಾದ ನೋಟಿಸ್ನಲ್ಲಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಶಿವಸೇನೆ ಯಾರೆದೆಂದು ನಿರ್ಧರಿಸಲು ಚುನಾವಣಾ ಆಯೋಗ ದಾಖಲೆಗಳನ್ನು ಕೇಳುತ್ತಿದೆ.