ಹೊಸದಿಗಂತ ಡಿಜಿಟಲ್ ಡೆಸ್ಕ್
ಹರಿಯಾಣದ ನುಹ್ನಲ್ಲಿನ ಮದರಸಾದಲ್ಲಿ ಶವವಾಗಿ ಪತ್ತೆಯಾಗಿದ್ದ 11 ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 13 ವರ್ಷದ ಆತನ ಸಹಪಾಠಿಯೇ ಕೊಲೆಗಾರ ಎಂಬ ಸಂಗತಿ ತಿಳಿದುಬಂದಿದೆ. ಪೊಲೀಸರು ಬಾಲಪರಾಧಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಆರೋಪಿ ವಿದ್ಯಾರ್ಥಿಗೆ ಮದರಸಾದಲ್ಲಿ ಓದಲು ಇಷ್ಟವಿರಲಿಲ್ಲ. ಈ ವಿಚಾರವಾಗಿ ಹತಾಶೆಗೊಂಡಿದ್ದ ಆತ ಯೋಜನೆ ರೂಪಿಸಿ ತನ್ನ ಸಮೀರ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಡ್ ಗ್ರಾಮದ ನಿವಾಸಿ ಸಮೀರ್ ಸೋಮವಾರ ಮದರಸಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಮೀರ್ ನನ್ನು ಮದರಸಾದ ನೆಲಮಾಳಿಗೆಯ ಕೋಣೆಗೆ ಕರೆದೊಯ್ದು ಕೊಂದು ಮರಳಿನಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಫರಿದಾಬಾದ್ನಲ್ಲಿರುವ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರದ ಪ್ರಾರ್ಥನೆಗಾಗಿ ಮದರಸಾದಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ತನ್ನ ಸಹಪಾಠಿ ವಿದ್ಯಾರ್ಥಿಯ ಕೊಲೆಗೆ ಶನಿವಾರವನ್ನು ಆರಿಸಿಕೊಂಡಿದ್ದೇನೆ ಎಂದು ಬಾಲಾಪರಾಧಿ ಹೇಳಿದ್ದಾನೆ. ಆರೋಪಿ ಹುಡುಗ ಮತ್ತು ಅವನು ಕೊಂದ ವಿದ್ಯಾರ್ಥಿ ಒಟ್ಟಿಗೆ ಆಟವಾಡುತ್ತಿದ್ದರು ಮತ್ತು ಚೆನ್ನಾಗಿ ಹೊಂದಿಕೊಳ್ಳುತ್ತಿದ್ದರು. ಅದಾಗ್ಯೂ ಹಂತಕ ವಿದ್ಯಾರ್ಥಿ ತನ್ನ ಮನಸಿಸಿನಲ್ಲಿದ್ದ ಆಕ್ರೋಶವನ್ನು ಹೊರಹಾಕಲು ಜೊತೆಗಾರನನ್ನೇ ಕೊಂದಿದ್ದಾನೆ. ಬಾಲಕ ನಾಪತ್ತೆಯಾದ ದೂರಿನನ್ವಯ ಪೊಲೀಸ್ ತಂಡಗಳು ತನಿಖೆಗಾಗಿ ಮದರಸಾಕ್ಕೆ ಭೇಟಿ ನೀಡಿ ಕೆಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಭಯಗೊಂಡಿದ್ದು ಕಂಡುಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ, ಆರೋಪಿಯು ಸೆಪ್ಟೆಂಬರ್ 3 ರ ಶನಿವಾರದಂದು ವಿದ್ಯಾರ್ಥಿಯನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೊಳೆತ ದೇಹವನ್ನು ಪೊಲೀಸರು ಸೆಪ್ಟೆಂಬರ್ 5 ರಂದು ವಶಪಡಿಸಿಕೊಂಡಿದ್ದರು ಮತ್ತು ಪಿನಂಗಾವಾ ಪೊಲೀಸ್ ಠಾಣೆಗೆ ಪ್ರಥಮ ಮಾಹಿತಿ ವರದಿ ಅಥವಾ ಎಫ್ಐಆರ್ ದಾಖಲಿಸಿದ್ದಾರೆ.
ಸಮೀರ್ ಅವರ ಚಿಕ್ಕಪ್ಪ ಇಕ್ಬಾಲ್ ನೀಡಿದ ದೂರಿನ ಪ್ರಕಾರ, ಆತ 2021 ರಿಂದ ಶಾಚೌಖಾ ಗ್ರಾಮದ ದರ್ಗಾ ವಾಲಾ ಮದರಸಾದಲ್ಲಿ ಉರ್ದು ಮತ್ತು ಅರೇಬಿಕ್ ಕಲಿಯುತ್ತಿದ್ದರು ಮತ್ತು ಅಲ್ಲಿಯೇ ವಾಸವಾಗಿದ್ದರು.
ಸೆಪ್ಟೆಂಬರ್ 3 ರಂದು ಸಮೀರ್ ಮದರಸಾದಿಂದ ನಾಪತ್ತೆಯಾಗಿದ್ದಾನೆ ಎಂದು ಗ್ರಾಮದ ಹಾಜಿ ಅಖ್ತರ್ ಕುಟುಂಬಕ್ಕೆ ತಿಳಿಸಿದ್ದರು. ನಂತರ ಕಟ್ಟಡದಲ್ಲಿ ಆತನ ಶವ ಪತ್ತೆಯಾಗಿದೆ.