ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದಲ್ಲಿ ಕಳೆದ ಹಲವು ದಿನಗಳಿಂದ ಇದ್ದ ಬಿಸಿಗಾಳಿಯ ವಾತಾವರಣ ಇದೀಗ ಹಲವು ರಾಜ್ಯಗಳಲ್ಲಿ ಕಡಿಮೆಯಾಗಿದ್ದು, ಭಾನುವಾರ ಉಷ್ಣಾಂಶ ಇಳಿಮುಖವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾನುವಾರ ಭಾರತೀಯ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಆರ್.ಕೆ. ಜಿನಮಣಿ ಈ ಕುರಿತು ಮಾಹಿತಿ ನೀಡಿದ್ದು, ದೇಶದ ಹಲವು ಪ್ರದೇಶಗಳಲ್ಲಿ ಉಷ್ಣಾಂಶ ಕುಸಿತವಾಗಿದೆ. ಪೂರ್ವ ಭಾರತದ ಪ್ರದೇಶಗಳಲ್ಲಿ ಇಂದು ಬಿಸಿಗಾಳಿಯ ವಾತಾವರಣ ಇಲ್ಲ ಎಂದರು.
ಉತ್ತರ ಪ್ರದೇಶದ ಉತ್ತರ ಭಾಗ, ದೆಹಲಿ, ಉತ್ತರ ಪಂಜಾಬ್ ಮತ್ತು ಉತ್ತರ ಹರ್ಯಾಣದಲ್ಲಿ ಬಿಸಿಗಾಳಿಯ ಪ್ರಭಾವಿಲ್ಲ. ಮೇ 1 ರಿಂದ 5ರ ತನಕ ತಾಪಮಾನ ಸಾಮಾನ್ಯವಾಗಿರುತ್ತದೆ ಎಂದು ಆರ್. ಕೆ. ಜಿನಮಣಿ ಹೇಳಿದರು.
ಪಂಜಾಬ್, ರಾಜಸ್ಥಾನ, ದೆಹಲಿ, ಹರ್ಯಾಣ, ಉತ್ತರ ಪ್ರದೇಶದಲ್ಲಿ ಮಳೆಯ ಮುನ್ಸೂಚನೆ ಇದೆ. ಈ ಪ್ರದೇಶಗಳಲ್ಲಿ ಗುಡುಗು ಮತ್ತು ದೂಳಿನ ಗಾಳಿಯ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಾಯುಭಾರ ಕುಸಿತ ಅಂಡಮಾನ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮೇ 4ರಂದು ಚಂಡಮಾರುತ ರೂಪಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಮೇ 6ರ ಬಳಿಕ ಹವಾಮಾನದಲ್ಲಿ ಬದಲಾವಣೆಯಾಗಬಹುದು. ಮೇ 6 ರಿಂದ 24 ಗಂಟೆಗಳ ಅವಧಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ತಿಳಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.