ಹೊಸ ದಿಗಂತ ವರದಿ,ವಿಜಯಪುರ:
ನಕಲಿ ಮತದಾರರ ಗುರುತಿನ ಚೀಟಿ ತಯಾರಿಸಿ ನೀಡುತ್ತಿದ್ದ ನೆಟ್ ಸೆಂಟರವೊಂದರ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ಮಾಡಿರುವ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಸಿರಾಜ್ ನೆಟ್ ಸೆಂಟರ್ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಆರೋಪಿ ಸಿರಾಜ್ ನದಾಫ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಕಂಪ್ಯೂಟರ್, ಪ್ರಿಂಟರ್ ಸಾಮಗ್ರಿಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿಕೆ ನಿವಾಸಿಯಾದ ಮಚ್ಚೇಂದ್ರ ಕಾಂಬ್ಳೆಗೆ ನಕಲಿ ಗುರುತಿನ ಚೀಟಿ ತಯಾರಿಸಿ ಸಿರಾಜ್ ಸೆಂಟರ್ ನವರು ನೀಡಿದ್ದಾರೆ. ಆದರೆ, ಮಚ್ಚೇಂದ್ರ ತಹಶೀಲ್ದಾರ್ ಕಚೇರಿಗೆ ತೆರಳಿ ಗುರುತಿನ ಚೀಟಿ ಹೊಂದಿಕೆಯಾಗುತ್ತಿಲ್ಲ, ಬದಲಾಗಿ ಬೇರೆದು ನೀಡುವಂತೆ ಮನವಿ ಮಾಡಿದ್ದು, ಈ ವೇಳೆಯಲ್ಲಿ ಗುರುತಿನ ಚೀಟಿ ಅನುಮಾಸ್ಪದ ರೀತಿಯಲ್ಲಿ ಕಂಡು ಬಂದಿದೆ. ಹೀಗಾಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ವಿಚಾರಣೆ ಮಾಡಿದಾಗ ನಕಲಿ ಮತದಾರರ ಚೀಟಿ ಎಂದು ಪತ್ತೆಯಾಗಿದೆ.
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.