ಹೊಸದಿಗಂತ ವರದಿ, ಮಡಿಕೇರಿ:
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಮಾಯಕ ನಿರುದ್ಯೋಗಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಓರ್ವನನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯ ಕಾಸರಗೋಡು ಮೂಲದ ಎಂ.ಹೆಚ್. ಶ್ರೀನಾಥ್ (45) ಎಂಬಾತ ಪೊಲೀಸರು ವಶಕ್ಕೆ ಪಡೆದ ಆರೋಪಿ. ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಬಾಲಂಬಿ ಗ್ರಾಮದ ಮೇಲ್ಚೆಂಬು ನಿವಾಸಿ ಜೇಮ್ಸ್ ಜೋಸೆಫ್(24) ಎಂಬವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 4 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದ ಶ್ರೀನಾಥ್, ಮುಂಗಡವಾಗಿ 1.50 ಲಕ್ಷ ರೂ.ಗಳನ್ನು 2021 ರಲ್ಲಿ ಪಡೆದಿದ್ದ. ಆದರೆ ಹಣ ನೀಡಿ ವರ್ಷ ತುಂಬುತ್ತಾ ಬಂದರೂ ವಿಸಾ ಮತ್ತು ಉದ್ಯೋಗ ಸಿಗದೇ ಇದ್ದಾಗ ಸಂಶಯಗೊಂಡ ಜೇಮ್ಸ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಶ್ರೀನಾಥ್’ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, 60 ಕ್ಕೂ ಅಧಿಕ ಯುವಕರಿಗೆ ಈತ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ. ವಂಚನೆಗೊಳಗಾದ ಕೆಲವರು ಈಗಾಗಲೇ ಪೊಲೀಸ್ ಠಾಣೆಗೆ ಬಂದು ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ