ನೂಪುರ್‌ ಶರ್ಮಾ ಹತ್ಯೆಗೆ ಗಡಿ ದಾಟಿ ಬಂದವನ ಬಂಧನ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಾಜಿ ಬಿಜೆಪಿ ವಕ್ತಾರೆನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಅಂತರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಗಡಿ ಭದ್ರತಾ ಪಡೆಗಳು ಬಂಧಿಸಿವೆ. ಭಾರತ-ಪಾಕ್‌ ಗಡಿ ದಾಟಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಗಡಿ ಭದ್ರತಾ ಪಡೆಗಳು ರಾಜಸ್ಥಾನದ ಗಂಗಾನಗರದ ಬಳಿ ಸರೆ ಹಿಡಿದಿದ್ದಾರೆ. ಪ್ರಸ್ತುತ ಐಬಿ, ಆರ್‌ಎಡಬ್ಲ್ಯೂ ಹಾಗೂ ಇತರ ಗುಪ್ತಚರ ಸಂಸ್ಥೆಗಳು ಆತನ ವಿಚಾರಣೆ ನಡೆಸುತ್ತಿವೆ.

ಮೂಲಗಳ ವರದಿಯ ಪ್ರಕಾರ ಜುಲೈ 16ರಂದು ರಾತ್ರಿ 11 ಗಂಟೆಯ ಆಸುಪಾಸಿನಲ್ಲಿ ಹಿಂದುಮಾಲ್ಕೋಟ್‌ ಗಡಿಯ ಬಳಿ ಭದ್ರತಾ ಪಡೆಗಳು ಗಸ್ತಿನಲ್ಲಿದ್ದಾಗ ಈತ ಅನುಮಾನಾಸ್ಪಾದವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನ ಬಳಿ ದೊಡ್ಡದಾದ ಚಾಕು, ಧಾರ್ಮಿಕ ಪುಸ್ತಕಗಳು, ಮರಳು ಹಾಗೂ ಬಟ್ಟೆಗಳಿರುವ ಬ್ಯಾಗೊಂದು ಪತ್ತೆಯಾಗಿದೆ. ಆತ ತನ್ನ ಹೆಸರನ್ನು ರಿಜ್ವಾನ್‌ ಅಶ್ರಫ್‌ ಎಂದು ಹೇಳಿದ್ದು ಪಾಕಿಸ್ತಾನದ ಉತ್ತರ ಪಂಜಾಬ್‌ ನ ಮಂಡಿ ಬಹಾವುದ್ದೀನ್ ಪ್ರದೇಶದವನು ಎಂದು ಬಹಿರಂಗ ಪಡಿದ್ದಾನೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರವಾದಿ ಮೊಹಮದ್‌ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣ ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡಲು ಬಂದಿರುವುದಾಗಿ ಆತ ತನಿಖೆಯ ವೇಳೆ ಒಪ್ಪಿಕೊಂಡಿದ್ದು, ಹತ್ಯೆ ಮಾಡುವ ಮೊದಲು ಅಜ್ಮೀರ ದರ್ಗಾಗೆ ತೆರಳಿ ಅಲ್ಲಿಂದ ತನ್ನ ಯೋಜನೆ ಪ್ರಾರಂಭಿಸಲು ಯೋಚಿಸಿದ್ದ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ.

ಭದ್ರತಾ ಪಡೆಗಳು ಆತನನ್ನು ಸ್ಥಳೀಯ ಪೋಲೀಸರ ವಶಕ್ಕೆ ನೀಡಿದ್ದು ಮ್ಯಾಜಿಸ್ಟ್ರೇಟರ ಬಳಿ ಹಾಜರುಪಡಿಸಿ ಆತನನ್ನು ಎಂಟುದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಸದ್ಯ ಇಂಟೆಲಿಜೆನ್ಸ್‌ ಬ್ಯೂರೋ, ರೀಸರ್ಚ್‌ ಅಂಡ್‌ ಅನಾಲಿಸೀಸ್‌ ವಿಂಗ್‌ ಸೇರಿದಂತೆ ಇತರ ಗುಪ್ತಚರ ವಿಭಾಗದವರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!