ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅನಾಹುತ ತಪ್ಪಿಸುವ ಸಲುವಾಗಿ ಸರ್ಕಾರ ಸಭೆಯೊಂದನ್ನು ಕರೆದಿತ್ತು. ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸರ್ವ ಪಕ್ಷ ಸಭೆಯನ್ನು ಆಯೋಜಿಸಿದ್ದು, ಸಮಯಕ್ಕೆ ಸರಿಯಾಗಿ ಮೀಟಿಂಗ್ ಆರಂಭವಾಗದ ಕಾರಣ ಬಿಜೆಪಿ ಶಾಸಕರು ವಿಧಾನಸೌಧದಿಂದ ಎದ್ದು ಹೋಗಿದ್ದಾರೆ.
ನಿನ್ನೆಯೇ ವಾಟ್ಸಾಪ್ ಮೂಲಕ ಸಭೆ ಬಗ್ಗೆ ಮಾಹಿತಿ ನೀಡಿದ್ದು, ಆಹ್ವಾನಿಸಲಾಗಿತ್ತು. ಆದರೆ ಬಿಜೆಪಿ ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜ್, ಅಶ್ವತ್ಥ್ ನಾರಾಯಣ್, ಎಸ್.ಆರ್. ವಿಶ್ವನಾಥ್ ಹಾಗೂ ಮುನಿರತ್ನ ಸಭೆ ವಿಳಂಬ ಹಿನ್ನೆಲೆ ವಿಧಾನಸೌಧ ತೊರೆದಿದ್ದಾರೆ.
ಈ ಬಗ್ಗೆ ಅಶ್ವತ್ಥ್ ನಾರಾಯಣ್ ಮಾತನಾಡಿದ್ದು, ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಕುರಿತಾಗಿ ಸಭೆ ಕರೆಯಲಾಗಿದೆ. ವಾಟ್ಸಾಪ್ನಲ್ಲಿ ಆಹ್ವಾನ ನೀಡಲಾಗಿದೆ. ನಾವು ಸಮಯಕ್ಕೆ ಸರಿಯಾಗಿ ಬಂದಿದ್ದೇವೆ. ಆದರೆ ಮೀಟಿಂಗ್ ಕರೆದವರು ಸಮಯಕ್ಕೆ ಸರಿಯಾಗಿ ಬಂದಿಲ್ಲ. ಅವರು ತಡವಾಗಿ ಬರುವುದೇ ಆಗಿದ್ದರೂ ಆ ಬಗ್ಗೆಯೂ ನಮಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.