ಹೊಸದಿಗಂತ ವರದಿ, ಅಂಕೋಲಾ:
ಗಂಗಾವಳಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಮಂಜಗುಣಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಕಾಮಗಾರಿಗೆ ನದಿಯಲ್ಲಿ ಹಾಕಲಾದ ಮಣ್ಣು ತೆಗೆಯದಿರುವ ಮತ್ತು ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಗುತ್ತಿಗೆದಾರರ ಸಿಬ್ಬಂದಿಗಳಿಗೆ ಮತ್ತು ಸಂಬಂಧಿಸಿದ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೇತುವೆ ನಿರ್ಮಾಣ ಸ್ಥಳಕ್ಕೆ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸ್ಥಳೀಯ ಪ್ರಮುಖರು ನದಿಯಲ್ಲಿ ಮಣ್ಣು ಹಾಕಿರುವುದರಿಂದ ಕೃತಕ ನೆರೆಗೆ ಕಾರಣವಾಗುತ್ತಿರುವುದು ಸುಮಾರು 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ನೆರೆಯಿಂದಾಗಿ ಸಮಸ್ಯೆ ಎದುರಿಸುತ್ತಿರುವ ಕುರಿತು ತಿಳಿಸಿದರು.
ನದಿಯಲ್ಲಿ ಸುಮಾರು 30 ಅಡಿಗಳಷ್ಟು ಆಳ ಮಣ್ಣು ಹಾಕಲಾಗಿದ್ದು ಕೇವಲ ಮೇಲೆ ಇದ್ದ ಮಣ್ಣು ಮಾತ್ರ ತೆರುವು ಮಾಡಲಾಗಿದೆ ಇನ್ನೂ 28 ಅಡಿ ಮಣ್ಣು ಇದ್ದು ನೀರಿನ ಹರಿವಿಗೆ ಸಮಸ್ಯೆ ಎದುರಾಗುತ್ತಿದೆ, ದೋಣಿ ಸಾಗಲು ಸಹ ಸಮಸ್ಯೆ ಎದುರಾಗಿದೆ ಕೂಡಲೇ ಮಣ್ಣು ತೆರುವು ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಅಧಿಕಾರಿಗಳು ನಿರುತ್ತರ ನದಿಯಲ್ಲಿ ಹಾಕಿದ ಮಣ್ಣು ತೆರೆಯುವಂತೆ ಸಾಕಷ್ಟು ಬಾರಿ ಸಂಪರ್ಕಿಸಲಾಗಿದೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಸಂಬಂಧಿಸಿದ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಶಾಸಕರ ಪ್ರಶ್ನೆಗಳಿಗೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ನಿರುತ್ತರರಾಗಿದ್ದು, ಶಾಸಕಿ ರೂಪಾಲಿ ನಾಯ್ಕ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
ಬಡ ಜನರ ಜೀವನದ ಜೊತೆ ಯಾಕೆ ಆಟ ಆಡುತ್ತೀರಿ ಎಂದು ಪ್ರಶ್ನಿಸಿದ ಶಾಸಕಿ ಎರಡು ದಿನಗಳಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿ ಹಾಕಲಾದ ಮಣ್ಣು ಬಾರ್ಜ್ ಮೂಲಕ ತೆರುವುಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ಧಾರ ಉದಯ ಕುಂಬಾರ, ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರವಿಣಕುಮಾರ್ , ಗಂಗಾವಳಿ ನದಿ ನೆರೆ ನಿರಾಶ್ರಿತರ ವೇದಿಕೆಯ ಪ್ರಮುಖ ಶ್ರೀಪಾದ ನಾಯ್ಕ, ನಾಗರಾಜ ಮಂಜಗುಣಿ, ರಮೇಶ ಗೌಡ ಮತ್ತಿತರರು ಉಪಸ್ಥಿತರಿದ್ದರು.