ಪಠ್ಯ ಪುಸ್ತಕದಲ್ಲಿನ ಗೊಂದಲ: ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ‌. ಸಿ. ನಾಗೇಶ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಯಾವುದನ್ನು ಮಕ್ಕಳು ಓದುತ್ತಾರೆಯೋ ಅದೇ ಪಠ್ಯದಲ್ಲಿ ಇರಬೇಕು ಅದು ಬಿಟ್ಟು ಯಾವುದೇ ಸಿದ್ದಾಂತವನ್ನು ಅಳವಡಿಸುವುದು ತಪ್ಪು ಎಂಬುದೇ ನಮ್ಮ ನಿಲುವು ಎಂದು ಶಿಕ್ಷಣ ಸಚಿವ ಬಿ‌. ಸಿ ನಾಗೇಶ್ ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ವಿಧಾನಸೌಧದಲ್ಲಿ ಮಾತನಾಡಿದ ಅವರು, 2017ರಲ್ಲಿ ನಾಡಗೀತೆ ಬಗ್ಗೆ ಕೆಟ್ಟದಾಗಿ ಬರೆದ ಮೆಸೇಜ್ ಅನ್ನು ರೋಹಿತ್ ಚಕ್ರತೀರ್ಥ ಪಾರ್ವರ್ಡ್ ಮಾಡಿದ್ದಾರೆ. ಫಾರ್ವರ್ಡ್ ಮಾಡುವಾಗಲೇ ಅದು ಫಾರ್ವರ್ಡ್ ಮೆಸೇಜ್ ಅಂತ ಉಲ್ಲೇಖಿಸಿದ್ದರು. ಆದರೆ, ಅಂದಿನ ಸರ್ಕಾರ ಅವರ ಮೇಲೆ ಕೇಸ್ ಬುಕ್ ಮಾಡಿತ್ತು. ಆದರೆ, ಬಿ ರಿಪೋರ್ಟ್ ಕೂಡಾ ಹಾಕಲಾಗಿತ್ತು. ನಾನು ಬರೆದಿದ್ದು ಅಲ್ಲ ಫಾರ್ವರ್ಡ್ ಮಾಡಿದ್ದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈಗಲೂ ಅವರು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೂ ಅವರು ಅವಮಾನಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಇನ್ನು ಈ ಕುರಿತು ನಿನ್ನೆ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೇನೆ. ಅವರಿಗೆ ಎಲ್ಲವನ್ನೂ ವಿವರಿಸಿದ್ದೇನೆ. ಅವರೂ ಪಠ್ಯದ ಬಗ್ಗೆ ಆಕ್ಷೇಪ ಇಲ್ಲ ಎಂದಿದ್ದಾರೆ. ನಾಡ ಗೀತೆಗೆ ಅವಮಾನ ಮಾಡಿದ್ದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಸಿಎಂಗೆ ಪತ್ರ ಬರೆದಿದ್ದೇನೆ ಎಂದರು.

ಯಾರು ನಾಡಗೀತೆಗೆ ಅವಮಾನ ಮಾಡಿದ್ದರೋ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವೂ ಸಿಎಂಗೆ ಮನವಿ ಮಾಡಿದ್ದೇವೆ. ಜನ ಫಾರ್ವರ್ಡ್ ಮೆಸೇಜ್ ಅನ್ನು ಇಷ್ಟಪಟ್ಟು ಫಾರ್ವರ್ಡ್ ಮಾಡಿರುತ್ತಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೂ ಅವರು ಶಿಕ್ಷೆಗೂ ಒಳಗಾಗಿದ್ದಾರೆ. ಆ ಪ್ರಕರಣ ಸಂಬಂಧ ಬಿ ರಿಪೋರ್ಟ್ ಕೂಡ ಹಾಕಲಾಗಿದೆ. ಸಾಹಿತಿ ದೇವನೂರು ಮಹಾದೇವರನ್ನು ಭೇಟಿ ಮಾಡುತ್ತೇನೆ ಅಂದಿದ್ದೆ.‌ ಇನ್ನೂ ಭೇಟಿ ಮಾಡಿಲ್ಲ. ಅವರ ಪತ್ರ ನನ್ನ ಕೈ ಸೇರಿದೆ. ಪರಿಷ್ಕರಣಾ ಸಮಿತಿ ಮಾಡಿದ್ದೇ ಮಕ್ಕಳಿಗೆ ಸಿದ್ಧಾಂತ ಹೇರಲು ಅಲ್ಲ ಎಂಬ ಕಾರಣಕ್ಕಾಗಿ ಎಂದರು.

ಹೆಡಗೇವಾರ್ ಭಾಷಣ ಸಿದ್ಧಾಂತನಾ?. ಅವರು ನೆಹರು ಬರೆದಿದ್ದ ಪತ್ರವನ್ನು ಪಠ್ಯದಲ್ಲಿ ಹಾಕಿದ್ದರಲ್ಲಾ?. ಅದು ಹಾಗಾದರೆ ಸಿದ್ಧಾಂತ ಅಂತನಾ? ಎಂದು ಪ್ರಶ್ನಿಸಿದರು. ಪಠ್ಯ ಪುಸ್ತಕದ ಅಂಶಗಳಲ್ಲಿ ಯಾವುದೇ ಸಿದ್ಧಾಂತ ಇಲ್ಲ. ಹೆಗ್ಡೆವಾರ್ ಮಾಡಿದ ಭಾಷಣದಲ್ಲಿ ಯಾವುದೇ ಸಿದ್ಧಾಂತ ಇಲ್ಲ. ಒಬ್ಬ ಮಗು ಯಾವುದನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕೋ ಎಂಬ ಸಂದೇಶವನ್ನು ಕೊಟ್ಟಿದ್ದೇವೆ. ಹೆಡಗೇವಾರ್ ದೇಶದ ಅತಿದೊಡ್ಡ ಸಂಘಟನೆಯ ಕಟ್ಟಿದವರು. ಪಠ್ಯಪುಸ್ತಕದಲ್ಲಿರುವ ಅಂಶಗಳು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ. ಯಾರಿಗಾದರೂ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಹೇಳಲಿ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು.

ಪಠ್ಯದಲ್ಲಿ ಬಸವಣ್ಣನ ವಿಚಾರ ಕೈಬಿಟ್ಟಿಲ್ಲ ಪೂರ್ತಿಯಾಗಿದೆ. ಒಮ್ಮೆ ಪರಿಷ್ಕರಣೆಯಾಗಿ ಬುಕ್ ಪ್ರಿಂಟ್ ಆದ ಬಳಿಕ ಮುಗೀತು.‌ ಇನ್ನೇನು ಹೊಸ ಪರಿಷ್ಕರಣೆ ಸಮಿತಿಯನ್ನು ನೇಮಿಸುವುದಿಲ್ಲ‌. ಯಾರು ಮುಂದೆ ಪಠ್ಯ ಪುಸ್ತಕವನ್ನು ಪರಿಷ್ಕರಣೆ ಮಾಡಬೇಕು ಅಂತ ಆಸೆ ಪಡುತ್ತಾರಲ್ಲಾ ಅವರು ಮಾಡಲಿ. ಮತ್ತೆ ಟಿಪ್ಪು ಅಂಶವನ್ನು ಹೆಚ್ಚಿಗೆ ಸೇರಿಸಬೇಕು. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಮಾತ್ರ ಹೇಳಿಕೊಡಬೇಕು. ಹಿಂದೂ ಧರ್ಮದ ಅಂಶ ಕೈ ಬಿಡಬೇಕು ಅನ್ನುವವರು ಬಂದು ಪರಿಷ್ಕರಣೆ ಸಮಿತಿ ಮಾಡಲಿ‌ ಎಂದು ತಿಳಿಸಿದರು.

ಮೈಸೂರು ಮಹಾರಾಜರ ಪಠ್ಯವನ್ನು ಏಕೆ ತೆಗೆದಿದ್ದರು?. ಅವರು ರೈಟಾ..ಲೆಫ್ಟಾ..? ಮಹಾರಾಜರು ರೈಟ್ ಅಂತ ಏಕೆ ಅವರಿಗೆ ಕಾಣಿಸಿತು? . ಮೈಸೂರು ಮಹಾರಾಜರು ಏನಾದರೂ ಸಿದ್ಧಾಂತ ಹೇಳಿದ್ದರಾ?. ಮಕ್ಕಳು ಮೈಸೂರು ಮಹಾರಾಜರ ಬಗ್ಗೆ ತಿಳಿದುಕೊಳ್ಳಬಾರದಾ?. ಬೆಂಗಳೂರು ಬಗ್ಗೆ ತೋರಿಸಬೇಕಾದರೆ ಯಾವುದೇ ದೇವಸ್ಥಾನ ಸಿಕ್ಕಿಲ್ಲವಾ?. ಕೇವಲ ಮಸೀದಿ, ಚರ್ಚ್ ಮಾತ್ರ ಸಿಕ್ಕಿದ್ದಾ?. ಯಾವ ನೈತಿಕತೆ ಇಟ್ಟು ಈವಾಗ ಈ ರೀತಿ ಮಾತನಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಮಾಡುವುದು ತಪ್ಪು. ವಿರೋಧ ಮಾಡುವವರು ಕಳೆದ ಒಂದು ತಿಂಗಳ ಹಿಂದಿನಿಂದಲೇ ವಿರೋಧ ಮಾಡುತ್ತಿದ್ದಾರೆ. ಹಾಗೂ ದಿನಕ್ಕೊಂದು ವಿಚಾರ ಇಟ್ಟು ವಿರೋಧ ಮಾಡುತ್ತಿದ್ದಾರೆ. ಮೊದಲಿಗೆ ಟಿಪ್ಪು, ಬಳಿಕ ಕೇಸರೀಕರಣ, ಭಗತ್ ಸಿಂಗ್ ಪಠ್ಯ ತೆಗೆದರು. ಹೀಗೆ ಪ್ರತಿದಿನ ಒಂದೊಂದು ವಿಚಾರ ಇಟ್ಟು ವಿವಾದ ಮಾಡುತ್ತಿದ್ದಾರೆ. ಹಿರಿಯರಾದವರ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವತಂತ್ರ್ಯ ಇದೆ. ಸ್ವಾಮೀಜಿಗಳಿಗೆ ನಮ್ಮ ಪಠ್ಯಪುಸ್ತಕದ ಬಗ್ಗೆ ಗೊಂದಲ ಇದ್ದರೆ ಎಲ್ಲಾ ದಾಖಲೆಗಳೊಂದಿಗೆ ಹೋಗಿ ಭೇಟಿ ಮಾಡಿ ವಿವರಣೆ ಕೊಡುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!