ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ-ಮೇಘಾಲಯ ನಡುವೆ ಉಂಟಾಗಿದ್ದ ಸುದೀರ್ಘ ಗಡಿ ಸಮಸ್ಯೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಇತ್ಯರ್ಥಗೊಂಡಿದೆ.
ಉಭಯ ರಾಜ್ಯದ ಮುಖ್ಯಮಂತ್ರಿಗಳು ಮಹತ್ವದ ಒಪ್ಪಂದಕ್ಕೆ ಇಂದು ಸಹಿ ಹಾಕುವ ಮೂಲಕ 50 ವರ್ಷಗಳಿಂದ ಉಂಟಾಗಿದ್ದ ಗಡಿ ಸಂಘರ್ಷ ಅಂತ್ಯಗೊಂಡಿತು.
ದಶಕಗಳಿಂದಲೂ ಜೀವಂತವಾಗಿದ್ದ ಗಡಿ ವಿವಾದ ಇದೀಗ ಮುಕ್ತಾಯಗೊಂಡಿರುವ ಕಾರಣ ಈಶಾನ್ಯ ಭಾಗಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಗೃಹ ಸಚಿವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಗಿ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಹಾಗೂ ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ ಸಹಿತ ಮೇಘಾಲಯದ ಸರ್ಕಾರದ ಪರವಾಗಿ 11 ಪ್ರತಿನಿಧಿಗಳು ಹಾಗೂ ಅಸ್ಸೋಂ ಪರವಾಗಿ 9 ಪ್ರತಿನಿಧಿಗಳು ಭಾಗಿಯಾಗಿದ್ದರು.
ಇಂದು ನಡೆದ ಮಹತ್ವದ ಒಪ್ಪಂದದ ಪ್ರಕಾರ ಎರಡೂ ಸರ್ಕಾರಗಳು ರಾಜ್ಯದ ಗಡಿಯಲ್ಲಿ 885 ಕಿಲೋ ಮೀಟರ್ ಉದ್ದದ ಗಡಿ ಭೂಮಿ ಹಂಚಿಕೊಳ್ಳಲು ನಿರ್ಧರಿಸಿವೆ. ಪ್ರಮುಖವಾಗಿ ತರಾಬರಿ ಮೇಲ್ದಂಡೆ, ಗಂಜಾಗ್ ಮೀಸಲು ಅರಣ್ಯ ಪ್ರದೇಶ, ಹಾಹಿಂ, ಲಾಂಗ್ಪಿಹ್, ಬೋರ್ಡುವಾರ್, ಬೊಕ್ಲಾಪಾರಾ, ನೋಂಗ್ವಾ, ಮಾಟಮುರ್, ಖಾನಾಪಾರಾ-ಪಿಲಂಕಾಟಾ, ಖಂಡುಲಿ ಮತ್ತು ರೆಟಾಚೆರಾ ಪ್ರದೇಶದಲ್ಲಿ ಉಭಯ ರಾಜ್ಯಗಳ ಮಧ್ಯೆ ಗಡಿ ಸಮಸ್ಯೆ ಇತ್ತು.