ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಜ್ಯ ಸರಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ₹ 47,541 ಕೋಟಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಇದು 2022ರ ಜನವರಿ ತಿಂಗಳಿಗೆ ಮಾಮೂಲಿಯಂತೆ ಹಂಚಿಕೆಯಾಗುವ ತೆರಿಗೆಯ ಜೊತೆಗೆ ಹೆಚ್ಚುವರಿಯಾಗಿದ್ದು, ಅದನ್ನು ಇಂದು ಬಿಡುಗಡೆ ಮಾಡಲಾಗಿದೆ.
ಇದರಿಂದಾಗಿ ರಾಜ್ಯಗಳು 2022ರ ಜನವರಿ ತಿಂಗಳಲ್ಲಿ ಒಟ್ಟು ₹ 95,082 ಕೋಟಿ ಅಥವಾ ತಮಗೆ ಹಂಚಿಕೆಯಾಗಿರುವುದಕ್ಕಿಂತ ದುಪ್ಪಟ್ಟು ಹಣವನ್ನು ಸ್ವೀಕರಿಸಲಿವೆ.
ಭಾರತ ಸರಕಾರ ರಾಜ್ಯಗಳ ತೆರಿಗೆ ಹಂಚಿಕೆಯ ಮೊದಲ ಮುಂಗಡ ಕಂತು ₹ 47,541 ಕೋಟಿಗಳನ್ನು ನವೆಂಬರ್ 22ರಂದೇ ಬಿಡುಗಡೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಇಂದು ಎರಡನೇ ಮುಂಗಡ ಕಂತು ಬಿಡುಗಡೆಯಾಗುವುದರೊಂದಿಗೆ ರಾಜ್ಯಗಳು ಒಟ್ಟು ತೆರಿಗೆ ಹಂಚಿಕೆಯಲ್ಲಿ ಹೆಚ್ಚುವರಿಯಾಗಿ ₹ 90,082 ಕೋಟಿಗಳನ್ನು ಸ್ವೀಕರಿಸಲಿವೆ. ಇದು ಜನವರಿ 2022ರ ವರೆಗೆ ಅಂದಾಜಿಸಿದ್ದಕ್ಕಿಂತ ಅಧಿಕ ಮೊತ್ತವಾಗಿದೆ.
ಅಲ್ಲದೆ ಭಾರತ ಸರಕಾರ 2021-22ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಉಂಟಾಗುವ ಜಿಎಸ್ಟಿ ಪರಿಹಾರದ ಕೊರತೆಯನ್ನು ನೀಗಿಸಲು ₹ 1.59 ಲಕ್ಷ ಕೋಟಿ ಮೊತ್ತದ ಸಾಲವನ್ನು ಆಗಾಗ್ಗೆ ನೀಡುತ್ತಿದ್ದು, ಅದು 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಂಡಿದೆ.
ಕೋವಿಡ್-19 ಸಾಂಕ್ರಾಮಿಕದ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಲು ಮತ್ತು ಬಂಡವಾಳ ಹಾಗೂ ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳ ಶಕ್ತಿವರ್ಧನೆಗೆ ಭಾರತ ಸರಕಾರ ಬದ್ಧವಾಗಿದ್ದು, ಅದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.