ಹೊಸದಿಗಂತ ಡಿಜಿಟಲ್ ಡೆಸ್ಕ್
ಆರ್ವಿ ರೋಡ್-ಬೊಮ್ಮಸಂದ್ರ ನಮ್ಮ ಮೆಟ್ರೋ ಹಳದಿ ಮಾರ್ಗ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಜನರು ನಿರಾಶೆಗೊಂಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹಳದಿ ಮಾರ್ಗ ಉದ್ಘಾಟನೆ ವಿಳಂಬಕ್ಕೆ ಕಾರಣ ನೀಡಿದ್ದಾರೆ. ಹಾಗೇ, ಹಳದಿ ಮಾರ್ಗ ಆರಂಭದ ವಿಚಾರವಾಗಿಯೂ ಮಾಹಿತಿ ನೀಡಿದ್ದಾರೆ. ಈ ಕುರಿತು ಸಮಾಜಿಕ ಜಾಲತಾಣದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಮುಂದುವರೆದು, ರೈಲು ತಯಾರಿಕೆಯನ್ನು ತ್ವರಿತಗೊಳಿಸಲು ನಾನು ರೈಲು ತಯಾರಕರಾದ ತೀತಗಢ್ ರೈಲ್ ಸಿಸ್ಟಮ್ಸ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗ ಜನವರಿ 6 ರಂದು ಬೆಂಗಳೂರಿಗೆ ಮೊದಲ ರೈಲು ಬರಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಮತ್ತು ಏಪ್ರಿಲ್ನಲ್ಲಿ ಮೂರನೇ ರೈಲು ಬೆಂಗಳೂರಿಗೆ ತಲುಪಲಿದೆ ಎಂದು ಹೇಳಿದರು.
ಬಳಿಕ ತಿಂಗಳಿಗೆ 1 ರೈಲು, ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳು ಆಗಮಿಸಲಿವೆ. ಜನವರಿ 6 ರಂದು ತೀತಗಢ್ ರೈಲ್ ಸಿಸ್ಟಮ್ಸ್ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಸಚಿವರು ಮನವಿ ಮಾಡಿದ್ದೇನೆ. ಇದೇ ವೇಳೆ ಬೆಂಗಳೂರಿಗೆ ಬರಲಿರುವ ಮೆಟ್ರೋ ರೈಲುಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.