ಹೊಸದಿಗಂತ ವರದಿ, ಹೊನ್ನಾವರ:
ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳೀಯರು ಆತಂಕಗೊಂಡ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ (66)ರ ಗೇರುಸೊಪ್ಪ ಸರ್ಕಲ್ ಬಳಿ ಸಂಭವಿಸಿದೆ.
ಅನಿಲ ತುಂಬಿದ ಟ್ಯಾಂಕರ್ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ ಕಂಡುಬಂದಿಲ್ಲ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಮುಂಜಾಗೃತಾ ಕ್ರಮಕೈಗೊಂಡಿದ್ದಾರೆ. ಅಲ್ಲದೆ ಗ್ಯಾಸ್ ಸೋರಿಕೆ ಕುರಿತು ಪರಿಶೀಲನೆ ನಡೆಸಲು ಮಂಗಳೂರಿoದ ವಿಶೇಷ ತಂಡವೊoದು ಆಗಮಿಸುತ್ತಿದೆ ಎನ್ನಲಾಗಿದೆ.
ಬದಲಿ ಮಾರ್ಗ: ಇನ್ನು ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಮಂಗಳೂರು ಕಡೆಯಿoದ ಬರುವ ವಾಹನಕ್ಕೆ ಗೇರುಸೊಪ್ಪಾ ಮಾರ್ಗದ ಆರೊಳ್ಳಿ ಸಾಲ್ಕೋಡು, ಅರೇಅಂಗಡಿ ಮಾರ್ಗವಾಗಿ ಚಂದಾವರ ಮೂಲಕ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಳಸುವಂತೆ ಸೂಚಿಸಲಾಗಿದೆ. ಭಾರೀ ಗಾತ್ರದ ವಾಹನ ಹೊರತುಪಡಿಸಿ ಬಸ್ಸು ಲಘು ವಾಹನಗಳ ಸಂಚಾರವನ್ನು ದುರ್ಗಾಕೇರಿ ಮಾರ್ಗವಾಗಿ ಸಂಚರಿಸುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.