ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶಿಷ್ಯರನ್ನು ಸಮರ್ಥರನ್ನಾಗಿಸುವ ಸಾಮರ್ಥ್ಯವಿರುವ ವ್ಯಕ್ತಿಗೆ ಮಾತ್ರ ಆಚಾರ್ಯ ಸ್ಥಾನ ಲಭಿಸಲು ಸಾಧ್ಯವಿದೆ. ಅನೇಕ ಕನಸುಗಳನ್ನು ಹೊತ್ತುಕೊಂಡು ವೇದಪಾಠಶಾಲೆಯನ್ನು ನಿರಂತರ ಮುನ್ನಡೆಸಬೇಕೆಂಬ ಮನೋಭಾವವನ್ನು ಹೊಂದಿದ, ಜೀವನವನ್ನು ವೇದಕ್ಕಾಗಿ ಮೀಸಲಿಟ್ಟ ವಿಶ್ವೇಶ್ವರ ಭಟ್ಟರ ಕಠಿಣ ಪರಿಶ್ರಮ ಇಂದು ಅವರನ್ನು ಆ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಶ್ರೌತಿ ಯಜ್ಞಪತಿ ಭಟ್ ಗೋಕರ್ಣ ನುಡಿದರು.
ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ ಶಿಷ್ಯವೃಂದದ ವತಿಯಿಂದ ನೀರ್ಚಾಲು ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವೇದಪಾಠಶಾಲೆಯ ೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಸೋಮವಾರ ಜರಗಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಾ ವೇದಾನುಷ್ಠಾನವನ್ನು ಮಾಡಿ ವೇದದಲ್ಲಿ ಹೇಳಲ್ಪಟ್ಟ ಕಲ್ಪೋಕ್ತ ಫಲಗಳನ್ನು ನಾವು ಪಡೆಯಬೇಕು. ಅವಿಚ್ಛಿನ್ನವಾಗಿ ಈ ವೇದಪಾಠ ಶಾಲೆ ಮುನ್ನಡೆಯಬೇಕೆಂಬ ವಿಶ್ವೇಶ್ವರ ಭಟ್ಟರ ಸಂಕಲ್ಪ ಸಾಕಾರಗೊಳ್ಳಲಿ ಎಂದರು.
ವೇದಪಾಠಶಾಲೆಗೆ ನಿರಂತರ ಸಹಕಾರವನ್ನು ನೀಡುತ್ತಿರುವ ಗೀತಾ ಮಾಮಿ ಹಾಗೂ ರಾಮಸ್ವಾಮಿ ದಂಪತಿಗಳು, ವೇದಬ್ರಹ್ಮ ಜಯರಾಮ ಭಟ್ ಬೆಂಗಳೂರು ಅವರಿಗೆ ಗೌರವಾರ್ಪಣೆ ನಡೆಯಿತು. ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ ಮಾತನಾಡಿ ಋಷಿಗೋತ್ರ ಪರಂಪರೆಗೆ ನಮ್ಮದಾಗಿದೆ. ನಮ್ಮೂರಿನಲ್ಲಿ ಸಂಪೂರ್ಣ ಅಧ್ಯಯನ ಕೇಂದ್ರ ಇರಬೇಕು ಎಂಬ ಮಹಾಸಂಕಲ್ಪವು ಸಾಕಾರಗೊಳ್ಳುವತ್ತ ಶಿಷ್ಯವೃಂದದವರ ಶ್ರಮ ಮುಂದುವರಿಯುತ್ತಿರುವುದು ಸಂತಸದ ವಿಚಾರವಾಗಿದೆ. ಮಂತ್ರವೈಭವ ಇಲ್ಲಿ ಇಂದು ನಡೆದಿದೆ, ಮುಂದೆಯೂ ನಡೆಯುತ್ತಿರಲು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಶಿಷ್ಯಂದಿರನ್ನು ಆಶೀರ್ವದಿಸಿದರು. ಬೆಳಗ್ಗೆ ಶತರುದ್ರ ಜಪ ಹೋಮ ನಡೆಯಿತು. ವೇದಮೂರ್ತಿ ಅಮೈ ಅನಂತಕೃಷ್ಣ ಭಟ್ ನಿರೂಪಿಸಿದರು. ವೇದಮೂರ್ತಿ ಶಂಭಟ್ಟ ಚಾವಡಿಬಾಗಿಲು, ಶಿಷ್ಯಂದಿರು, ವೈದಿಕರು ಸಹಕರಿಸಿದರು.