ಹೊಸದಿಗಂತ ವರದಿ, ಹಾಸನ
ತನ್ನ ಮಕ್ಕಳನ್ನು ನೋಡಲು ಪತ್ನಿ ಬಿಡದಿದ್ದಕ್ಕೆ ಸಿಟ್ಟಿಗೆದ್ದ ಪತಿಯೊಬ್ಬ ಎಲ್ಲರೂ ಮಲಗಿದ್ದಾಗ ಮನೆಗೇ ಬೆಂಕಿಯಿಟ್ಟ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ತಾಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಂಗಸ್ವಾಮಿ ಮನೆಗೆ ಬೆಂಕಿ ಹಚ್ಚಿದ ಪತಿ. ರಂಗಸ್ವಾಮಿ ಮತ್ತು ಪತ್ನಿ ನಡುವೆ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿತ್ತು. ಹೀಗಾಗಿ ಇಬ್ಬರು ದೂರಾಗಿದ್ದರು.
ದಂಪತಿಗೆ 7 ವರ್ಷದ ಚಿರಂತನ್, 5 ವರ್ಷದ ನಂದನ್ ಎಂಬ ಇಬ್ಬರು ಮಕ್ಕಳಿದ್ದರು. ಇವರು ತಾಯಿಯೊಂದಿಗೆ ವಾಸವಾಗಿದ್ದರು. ರಂಗಸ್ವಾಮಿ ಆಗಾಗ ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದರು.
ಆದರೆ ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಪತ್ನಿ ಗೀತಾ ಅವಕಾಶ ನೀಡಿರಲಿಲ್ಲ. ಇದರಿಂದ ಕೋಪಗೊಂಡ ರಂಗಸ್ವಾಮಿ, ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ತಂದು ಮದ್ಯರಾತ್ರಿ ಮನೆಗೆ ಬೆಂಕಿಯಿಟ್ಟಿದ್ದಾನೆ.
ಬೆಂಕಿ ಕಾಣಿಸಿಕೊಂ ಡ ತಕ್ಷಣವೇ ಎಚ್ಚತ್ತ ಸ್ಥಳೀಯರ ನೆರವಿನಿಂದ ಗೀತಾ ಹಾಗೂ ಮಕ್ಕಳು ಹೊರಗೋಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ