ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶನಿವಾರ ಸರ್ಕಾರಿ ನಿರ್ಣಯವನ್ನು (ಜಿಆರ್) ಹೊರಡಿಸಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ನಾಗರಿಕರಿಂದ ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಶುಭಾಶಯವನ್ನು ಬಳಸುವುದನ್ನು ಕಡ್ಡಾಯಗೊಳಿಸಿದೆ.
ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿರುವ ನಿರ್ಣಯದಲ್ಲಿ ಅಧಿಕಾರಿಗಳು ತಮ್ಮನ್ನು ಭೇಟಿಯಾಗಲು ಬರುವ ಜನರಲ್ಲಿ ‘ವಂದೇ ಮಾತರಂ’ ಅನ್ನು ಶುಭಾಶಯವಾಗಿ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ.
ಹಲೋ ಎಂಬುದು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಾಗಿದೆ. ಮತ್ತು ‘ಯಾವುದೇ ನಿರ್ದಿಷ್ಟ ಅರ್ಥವಿಲ್ಲದ ಶುಭಾಶಯವಾಗಿದ್ದು ಯಾವುದೇ ಪ್ರೀತಿಯನ್ನು ಉಂಟುಮಾಡುವುದಿಲ್ಲ’ ಎಂದು ನಿರ್ಣಯವು ಹೇಳಿದೆ.
ಮಹಾರಾಷ್ಟ್ರದ ಸಚಿವ ಸುಧೀರ್ ಮುಂಗಂಟಿವಾರ್ ಅವರು ಆಗಸ್ಟ್ನಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದಾಗ ಪ್ರಮಾಣ ವಚನ ಸ್ವೀಕರಿಸಿದ ನಂತರ ಈ ನಿರ್ದೇಶನವನ್ನು ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯ ಸಚಿವ ಸಂಪುಟದಲ್ಲಿ ಖಾತೆಗಳನ್ನು ಹಸ್ತಾಂತರಿಸಿದ ಸ್ವಲ್ಪ ಸಮಯದ ನಂತರ ಅವರು ತಮ್ಮ ಮೊದಲ ನಿರ್ಧಾರವೊಂದರಲ್ಲಿ ಈ ಘೋಷಣೆ ಮಾಡಿದರು.
‘ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದು, ಅದರ ಔಚಿತ್ಯಕ್ಕೆ ಅನುಗುಣವಾಗಿ ಸರ್ಕಾರಿ ನೌಕರರು ಇನ್ನು ಮುಂದೆ ಹಲೋ ಬಳಸದೆ ವಂದೇ ಮಾತರಂನೊಂದಿಗೆ ದೂರವಾಣಿ ಸಂಭಾಷಣೆ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.