ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಮೀನೊಂದರ ಒಂದು ಭಾಗದ ಪ್ರತ್ಯೇಕ ನಕ್ಷೆ ತಯಾರಿಸಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಭೂ ದಾಖಲೆಗಳ ಕಛೇರಿಯ ಪ್ರಭಾರ ಸಹಾಯಕ ಪುಟ್ಟಸ್ವಾಮಿ ಸಿಧ್ಧಯ್ಯ ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಬೆಳಸೆ ಗ್ರಾಮದ 7ಎಕರೆ ಜಮೀನಿನಲ್ಲಿ 2 ಎಕರೆ ಕ್ಷೇತ್ರದ ಜಮೀನಿನ ಪ್ರತ್ಯೇಕ ನಕ್ಷೆ ತಯಾರಿಸಲು ವಂದಿಗೆ ಗೋಖಲೆ ಸೆಂಟಿನರಿ ಕಾಲೇಜಿನ ಸಮೀಪದ ನಿವಾಸಿ ರಮೇಶ ನಾರಾಯಣ ನಾಯಕ ಎನ್ನುವವರಿಂದ ಪುಟ್ಟಸ್ವಾಮಿ 50 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಆ ಕುರಿತು ಕಾರವಾರದ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.
ಶುಕ್ರವಾರ ರಾತ್ರಿ ಖಾಸಗಿ ಹೊಟೇಲ್ ಒಂದರಲ್ಲಿ 15 ಸಾವಿರ ಮುಂಗಡ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ತಂಡ ಆಪಾದಿತ ಅಧಿಕಾರಿಯನ್ನು ಬಂಧಿಸಿ ಲಂಚ ಸ್ವೀಕರಿಸಿದ ಹಣವನ್ನು ವಶಪಡಿಸಿಕೊಂಡು ಭೂ ದಾಖಲಾತಿ ಇಲಾಖೆಯ ಕಡತಗಳನ್ನು ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಎ.ಡಿ.ಜಿ.ಪಿ ಯವರ ಮಾರ್ಗದರ್ಶನದಲ್ಲಿ ಕಾರವಾರ ಲೋಕಾಯುಕ್ತ ಠಾಣೆಯ ಉಪಧೀಕ್ಷಕ ರಾಜು ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.