ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೇವಾಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಅಂಶ ಬೆಳಕಿದೆ ಬಂದಿದೆ.
ಸಿಧು ಮೂಸೇವಾಲ ಹತ್ಯೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರವು ಭದ್ರತೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮೇ 28 ರಂದು ಮೂಸೇವಾಲ ಅವರ ಭದ್ರತೆಯನ್ನು ಹಿಂಪಡೆದಿದ್ದಕ್ಕೆ ತಕ್ಷಣ ಕೆನಡಾ ಮೂಲದ ಲಾರೆನ್ಸ್ ಗ್ಯಾಂಗ್ನ ದರೋಡೆಕೋರ ಗೋಲ್ಡಿ ಬ್ರಾರ್ ಶಾರ್ಪ್ ಶೂಟರ್ಗೆ ಕರೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಜೊತೆಗೆ ಹತ್ಯೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ. ಮನೆಯಿಂದ ಹೊರಬಂದ ಮರುದಿನವೇ ಮೇ 29ರಂದು ಜವಾಹರಕೆ ಗ್ರಾಮದಲ್ಲಿ ಸಿಧು ಮೂಸೇವಾಲ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಆರೋಪಿಯಿಂದ ಮೊಬೈಲ್ ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಶಾರ್ಪ್ ಶೂಟರ್ ಸಿಧು ಮುಸೇವಾಲ ಅವರನ್ನು ಕೊಲ್ಲಲು ಮೊದಲೇ ಮಾನ್ಸಾ ತಲುಪಿದ್ದರು. ಅದರಂತೆ ಭದ್ರತೆ ವಾಪಸ್ ಪಡೆದಿದ್ದೇ ತಡ, ರಣ ಹದ್ದುಗಳಂತೆ ಕಾಯುತ್ತಿದ್ದ ಶೂಟರ್ಸ್ ಗಾಯಕನನ್ನು ಹತ್ಯೆ ಮಾಡಿದ್ದರು.
ಮೇ 29 ರಂದು ಸಿದ್ದು ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ, ಯಾರೇ ಅಭಿಮಾನಿ ಅವರ ಮನೆಗೆ ಫೋಟೋಗಳಿಗಾಗಿ ಬಂದರೆ ಅವರನ್ನು ಭೇಟಿಯಾಗುವುದು ಸಾಮಾನ್ಯ. ಇದನ್ನೇ ಸದುಪಯೋಗ ಪಡಿಸಿಕೊಂಡಿದ್ದ ಸಂದೀಪ್ ಕೇಕ್ರಾ ಹಾಗೂ ಜೊತೆಗಾರ ಬಲದೇವ್ ನಿಕ್ಕು ಅಭಿಮಾನಿಯಾಗಿ ಮನೆಗೆ ತೆರಳಿದ್ದರು.
ಆ ವೇಳೆಗಾಗಲೇ ಮನೆಯೊಳಗೆ ನುಗ್ಗಿ ಅವರನ್ನು ಕೊಲ್ಲುವ ಯೋಜನೆ ಇತ್ತು. ಆದರೆ, ಸಿಧು ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಗನ್ಮ್ಯಾನ್ ಇಲ್ಲದೆ ಥಾರ್ ಜೀಪ್ನಿಂದ ಹೊರಬಂದಾಗ, ಶೂಟರ್ಗಳಿಗೆ ಮತ್ತಷ್ಟು ಬಲ ಬಂದಿತ್ತು. ಗೋಲ್ಡಿ ತಕ್ಷಣವೇ ಶಾರ್ಪ್ ಶೂಟರ್ಗಳಿಗೆ ಕರೆ ಮಾಡಿ ಮೂಸೇವಾಲ ಮನೆಯಿಂದ ಹೊರ ಬಂದಿದ್ದಾರೆ ಎಂದು ತಿಳಿಸಿದ್ದಾನೆ. ಅದರಂತೆ ಜವಾಹರ್ಕೆಯಲ್ಲಿ ಗಾಯಕನನ್ನು ಸುತ್ತುವರೆದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.