ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷಾ ಶುಲ್ಕ ನೀಡಲು ನಿರಾಕರಿಸಿದ ತಂದೆಯನ್ನು ಕತ್ತು ಹಿಸುಕಿ ಕೊಂದು, ಆರು ಪೀಸ್ ಮಾಡಿ ಬಿಸಾಡಿದ ಭೀಕರ ಘಟನೆ ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದಿದೆ. ನೌಕಾಪಡೆಯ ಮಾಜಿ ಅಧಿಕಾರಿ ಉಜ್ವಲ್ ಚಕ್ರವರ್ತಿಯನ್ನು ತಾಯಿ ಜೊತೆ ಸೇರಿ ಮಗನೇ ಕೊಂದಿದ್ದಾನೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಿಟೆಕ್ನಿಕ್ ವಿದ್ಯಾರ್ಥಿಯಾದ ಮಗ ತಂದೆಗೆ ಪರೀಕ್ಷಾ ಶುಲ್ಕವಾಗಿ ಮೂರು ಸಾವಿರ ರೂ ಕೇಳಿದ್ದ. ಆದರೆ ಇದನ್ನು ನೀಡಲು ತಂದೆ ನಿರಾಕರಿಸಿದ್ದರು. ಇದೇ ಕಾರಣಕ್ಕೆ ಅಪ್ಪ ಮಗನ ಮಧ್ಯೆ ಜೋರು ಜಗಳವಾಗಿತ್ತು. ಕೋಪದಲ್ಲಿ ತಂದೆ ಮಗನ ಕೆನ್ನೆಗೆ ಹೊಡೆದಿದ್ದರು. ಇದಕ್ಕೆ ಪ್ರತಿಯಾಗಿ ಮಗ ತಂದೆಯನ್ನು ನೂಕಿದ್ದ. ಕುರ್ಚಿಗೆ ತಲೆ ತಗುಲಿ ಉಜ್ವಲ್ ಪ್ರಜ್ಞೆ ತಪ್ಪಿದ್ದರು. ಈ ವೇಳೆ ತಂದೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು, ತಾಯಿ ಹಾಗೂ ಮಗ ಸೇರಿ ಬಾತ್ರೂಂಗೆ ಉಜ್ವಲ್ ದೇಹ ಎಳೆದುಕೊಂಡು ಹೋಗಿ ಮಿನಿ ಗರಗಸದಿಂದ ದೇಹವನ್ನು ಆರು ಭಾಗವಾಗಿ ಕತ್ತರಿಸಿದ್ದಾರೆ.
ನಂತರ ಚೀಲದಲ್ಲಿ ದೇಹ ತುಂಬಿಸಿ ಆಗಾಗ್ಗೆ ವಿವಿಧೆಡೆ ಎಸೆದು ಬರಲಾಗಿದೆ. ತದನಂತರ ಇವರಿಬ್ಬರೇ ಠಾಣೆಗೆ ಬಂದು ತಂದೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಉಜ್ವಲ್ರ ವೈಯಕ್ತಿಕ ಡೈರಿಯಲ್ಲಿ ಮಗ ಹಾಗೂ ಪತ್ನಿ ಬಗ್ಗೆ ಅನುಮಾನ ಬರುವಂಥ ವಿಷಯಗಳು ಕಾಣಿಸಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸತತ ವಿಚಾರಣೆ ನಂತರ ಮಗ ತಾನೇ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.