ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಒಂದು ವಾರದ ಮಗುವನ್ನು ಮಹಿಳೆಯೊಬ್ಬರು ಕಿಡ್ನಾಪ್ ಮಾಡಿದ್ದು, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದಿವ್ಯ ರಶ್ಮಿ ವಾಣಿವಿಲಾಸ ಆಸ್ಪತ್ರೆಯಿಂದ ಒಂದು ವಾರದ ಮಗುವನ್ನು ಕದ್ದು ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ವಿವಿಪುರಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿಡ್ನಾಪ್ ಮಾಡಿದ್ದು ಯಾಕೆ?
ದಿವ್ಯಾ ರಶ್ಮಿ ಕೆಲ ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು, ಮರುಮದುವೆಗೆ ಮನಸ್ಸು ಒಪ್ಪಿರಲಿಲ್ಲ. ಒಂಟಿತನದಿಂದ ರೋಸಿಹೋಗಿದ್ದ ಮಹಿಳೆ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಈಗಿನ್ನೂ ಹುಟ್ಟಿದ ಮಕ್ಕಳಿಗೆ ತಂದೆ, ತಾಯಿ ಯಾರೆಂದು ತಿಳಿಯುವುದಿಲ್ಲ. ನನ್ನನ್ನೇ ತಾಯಿ ಎಂದುಕೊಳ್ಳುತ್ತದೆ ಎನ್ನುವ ಆಲೋಚನೆ ಮಾಡಿ ಆಸ್ಪತ್ರೆಗೆ ಬಂದು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಕಿಡ್ನಾಪ್ ಆದ ಮಗು ಮಲಗಿದ್ದ ವೇಳೆ, ತಾಯಿ ವಾಶ್ರೂಂಗೆ ತೆರಳಿದ್ದರು, ಸಮಯ ನೋಡಿದ ದಿವ್ಯಾ ಮಗುವನ್ನು ಕದ್ದು ರಾಮನಗರದ ಮನೆಗೆ ತೆರಳಿದ್ದಾರೆ. ಮಗುವಿನ ತಾಯಿ ದೂರು ದಾಖಲಿಸಿದ್ದು, ಪೊಲೀಸರು ಕಳ್ಳಿಗಾಗಿ ಹುಡುಕಾಟ ನಡೆಸಿದ್ದಾರೆ.
ದಿವ್ಯಾ ಸಿಕ್ಕಿದ್ದು ಹೇಗೆ?
ಮೈಸೂರು ರಸ್ತೆಯಲ್ಲಿ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಸಿಸಿ ಕ್ಯಾಮೆರಾದಿಂದ ಶುರು ಮಾಡಿ, ರಾಮನಗರದವರೆಗೂ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಒಟ್ಟಾರೆ ೬೦೦ ಕ್ಯಾಮೆರಾಗಳ ಪರಿಶೀಲನೆ ನಂತರ ಆಕೆ ರಾಮನಗರದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದು, ಆಕೆಯನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.