ಹೊಸದಿಗಂತ ವರದಿ ಹುಬ್ಬಳ್ಳಿ:
ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಹಳೇ ಬಸ್ ನಿಲ್ದಾಣದ ಸನ್ಮಾನ ಲಾಡ್ಜನಲ್ಲಿ ಉಪನಗರ ಪೊಲೀಸರು ಸೋಮವಾರ ತಡ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಶಿವಾನಂದ ಕಾರಜೋಳ (27), ವಿಜಯಪುರದ ಅಡವಿ ಶಂಕರಲಿಂಗನ ಗುಡಿ ಹತ್ತಿರದ ನಿವಾಸಿ ಕಲ್ಲಯ್ಯ ಪಟ್ಟದಮಠ(29) ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ರಸ್ತೆ ಹೆಗ್ಗರಣಿ ನಿವಾಸಿ ಗುರುರಾಜ ಜಾಧವ ಬಂತ ಆರೋಪಿಗಳು.
ಉಪನಗರದ ಪೊಲೀಸರು ಖಚಿತ ಮಾಹಿತಿ ಪಡೆದು ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 200 ರೂ. ಹಾಗೂ 100 ಮುಖ ಬೆಲೆ ಒಟ್ಟು 72 ನೋಟ್ಗಳು, ಒಂದು ಯುಎಸ್ಎ ಒನ್ ಮಿಲಯನ್ ಡಾಲರ್( 1 ಲಕ್ಷ ರೂ.), ಎರಡು ಬಂಗಾರ ಬಣ್ಣದ ಲೋಹನ ವಸ್ತು ವಶಪಡಿಸಿಕೊಂಡಿದ್ದಾರೆ.
ಖೋಟಾ ನೋಟಗಳನ್ನು ಬೇರೆಡೆಯಿಂದ ತಂದು ಚಲಾವಣೆ ಮಾಡುವ ಉದ್ದೇಶ ಹೊಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದೆ ಎಂದು ಉಪನಗರ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉಪನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.