ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಎಟಿಎಂ ಗೆ ಹಣ ತುಂಬಿಸುವ ವಾಹನದ ನಂಬಿಗಸ್ಥ ಚಾಲಕನೇ ಹಣ ಲಪಟಾಯಿಸಿ ಪರಾರಿಯಾದ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ. ಎಟಿಎಂಗಳಿಗೆ ಹಣ ತುಂಬುವ ಖಾಸಗಿ ಏಜೆನ್ಸಿಯೊಂದರ ವ್ಯಾನ್ ಚಾಲಕ ನಗದು ಮತ್ತು ಎರಡು ಗನ್ಗಳನ್ನು ಹೊಂದಿರುವ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಗುರುವಾರ ಸಂಜೆ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್ಐಆರ್ಡಿ ಚೌಕದಲ್ಲಿ ಈ ಘಟನೆ ನಡೆದಿದೆ.
ರಾಜೇಂದ್ರ ನಗರದ ಎಟಿಎಂಗೆ ಹಣ ಹಾಕಲು ಭದ್ರತಾ ಸಿಬ್ಬಂದಿಯೊಂದಿಗೆ ವಾಹನದಲ್ಲಿ ಬಂದಿದ್ದ ಫಾರೂಕ್ ಎಂಬಾತ ವಾಹನ ಸಮೇತ ಪರಾರಿಯಾಗಿದ್ದಾನೆ.
ರಾಜೇಂದ್ರನಗರ ಪೊಲೀಸರು ನಂತರ ರಂಗಾ ರೆಡ್ಡಿ ಜಿಲ್ಲೆಯ ಕಿಸ್ಮತ್ಪುರ ಸೇತುವೆಯಲ್ಲಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದ ಒಟ್ಟು ಮೊತ್ತದಲ್ಲಿ 3 ಲಕ್ಷ ರೂ. ನಾಪತ್ತೆಯಾಗಿದ್ದು ವಾಹನದಲ್ಲಿದ್ದ ಎರಡು 12 ಬೋರ್ ಗನ್ ಕೂಡ ಕಾಣೆಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಕುರಿತು ಪೋಲೀಸ್ ತನಿಖಾಧಿಕಾರಿಯೊಬ್ಬರು ”ಗುರುವಾರ ಸಂಜೆ 6.30ರ ಸುಮಾರಿಗೆ ಕೆನರಾ ಬ್ಯಾಂಕ್ ಎಟಿಎಂ ಎದುರು ಖಾಸಗಿ ಏಜೆನ್ಸಿಯೊಂದರ ಚಾಲಕ ಫಾರೂಕ್ 31,99,000 ರೂ. ನಗದು ಹೊಂದಿದ್ದ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಕಿಸ್ಮತ್ಪುರ ಸೇತುವೆ ಬಳಿ ವಾಹನ ಬಿಟ್ಟು ಹೋಗಿದ್ದು, ಒಟ್ಟು ಮೊತ್ತದಲ್ಲಿ 3 ಲಕ್ಷ ರೂ ಕಾಣೆಯಾಗಿದೆ. ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏರ್ ಗನ್ ಮತ್ತು 12-ಬೋರ್ ಗನ್ನೊಂದಿಗೆ ಆರೋಪಿ ತಲೆಮರೆಸಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.
ಈ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.