ಹೊಸದಿಗಂತ ವರದಿ ಮಡಿಕೇರಿ:
ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಠಾಣಾ ಸರಹದ್ದಿನಲ್ಲಿ ವ್ಯಾಪಾರ ಮಳಿಗೆಗಳ ಕ್ಯಾಶ್ ಕೌಂಟರಿನಿಂದ ಹಣ ಕಳ್ಳತನ ಮಾಡಿದ್ದ 3 ಪ್ರತ್ಯೇಕ ಪ್ರಕರಣಗಳನ್ನು ಪೊನ್ನಂಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಹಾಸನ ಜಿಲ್ಲೆ ವಿಜಯನಗರದ ನಿವಾಸಿ ಮಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದ್ದು ಆತನಿಂದ 33,700 ರೂ.ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೊನ್ನಂಪೇಟೆ ನಿವಾಸಿ ಸೀತಾರಾಮ್ ಎಂಬವವರ ಕಾಫಿ ಅಂಗಡಿಯಲ್ಲಿ 1,12,500 ರೂ. ನಗದು ಹಣವನ್ನು ಕಳವು ಮಾಡಿದ್ದಾಗಿ ಪೊನ್ನಂಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮತ್ತೊಂದೆಡೆ ಜು.22 ರಂದು ಪೊನ್ನಂಪೇಟೆ ನಗರದ ಕೌಶಲ್ಯ ಟ್ರೇಡರ್ಸ್ ಸಿಮೆಂಟ್ ಅಂಗಡಿಯಲ್ಲಿ 10,000ರೂ. ನಗದು ಕಳವು. ಇದಲ್ಲದೆ ಮೇ 26ರಂದು ಗೋಣಿಕೊಪ್ಪ ಬೈಪಾಸ್ ರಸ್ತೆಯಲ್ಲಿರುವ ಪೂವಣ್ಣನವರ ಡಿ.ಜಿ ಫಾರ್ಮ್ಸ್ ಮಳಿಗೆಯಲ್ಲಿ 51,800 ರೂ.ನಗದನ್ನು ಅಪಹರಿಸಿದ್ದರು. ಈ ಬಗ್ಗೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ವೀರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿಯವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರ ನೇತೃತ್ವದ ತನಿಖಾ ತಂಡ ಈ ಪ್ರಕರಣಗಳ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.