ಹೊಸದಿಗಂತ ವರದಿ ಹಾವೇರಿ :
ಕನ್ನಡಕ್ಕೆ ಆಪತ್ತು ತರುವ ಶಕ್ತಿ ಇಡೀ ಜಗತ್ತಿನಲ್ಲಿ ಹುಟ್ಟೇ ಇಲ್ಲ, ಮುಂದೆ ಹುಟ್ಟುವುದೂ ಇಲ್ಲ. ಕನ್ನಡಿಗರು ಈ ಮನೋಸ್ಥಿತಿಯಿಂದ ಹೊರ ಬಂದು ಇನ್ನಷ್ಟು ಸಮೃದ್ಧವಾಗಿಭಾಷೆ ಕಟ್ಟುವ ಕಾಯಕದಲ್ಲಿ ಆತ್ಮವಿಶ್ವಾಸದಿಂದ ಶ್ರಮಿಸೋಣ ಎಂದು ಕರೆ ನೀಡಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಅವರು ಶುಕ್ರವಾರ 86 ನೇ ಅ. ಭಾರತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ, ಸಾಹಿತ್ಯ , ಪರಂಪರೆ ಬಹಳ ಶ್ರೀಮಂತವಾದುದು. ಇದಕ್ಕೆ ಕುತ್ತು ತರಲು ಸಾಧ್ಯವಿಲ್ಲ ಎಂದರು.
ಕನ್ನಡ ಭಾಷೆ , ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಆಡಳಿತದ ಎಲ್ಲ ರಂಗಗಳಲ್ಲಿ ಕನ್ನಡ ತರುವ ಪ್ರಾಮಾಣಿಕ ಪ್ರಯತ್ನ ನಡೆದಿದ್ದು ಇದಕ್ಕೆ ಕಾನೂನು ಸ್ವರೂಪ ನೀಡಲಾಗುವುದು. ಈಗಾಗಲೇ ಕಾನೂನು ವಿಭಾಗ ಕರಡು ರಚಿಸಿದ್ದು ಸಮಗ್ರವಾಗಿ ಚರ್ಚಿಸಿ ಅದನ್ನು ಕಾನೂನಾಗಿ ತರಲಾಗುವುದು ಎಂದರು.
ಗಡಿ ಒಳಗೆ ಹಾಗೇ ಗಡಿ ಆಚೆಯೂ ಕನ್ನಡ , ಭಾಷೆ, ಶಾಲೆಗಳನ್ನು ಉಳಿಸಲು, ಅವರಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.