ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು,ಬಳಿಕಕಟಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ.
ಬಳಿಕ ಮಾತನಾಡಿದ ಮೋದಿ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದ್ದಾರೆ.
ಒಡಿಶಾ ರೈಲು ದುರಂತ ತೀವ್ರ ನೋವು ತಂದಿದೆ. ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ. ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು. ಘನಘೋರ ದುರಂತ ಹಲವು ಸಾವು ನೋವಿಗೆ ಕಾರಣವಾಗಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಾಳುಗಳಿಗೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಎಚ್ಚರಿಕೆಯನ್ನು ನೀಡಿದ ಮೋದಿ, ಒಡಿಶಾ ರೈಲು ದುರಂತವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸೂಕ್ತ ತನಿಖೆಗೆ ಆದೇಶ ನೀಡಲಾಗಿದೆ. ಈ ಘಟನೆಗೆ ತಪ್ಪಿತಸ್ಥರರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ. ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಈ ರೈಲಿನಲ್ಲಿ ಹಲವು ರಾಜ್ಯದ ಪ್ರಯಾಣಿಕರಿದ್ದರು. ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಮನಸ್ಸನ್ನು ವಿಚಲಿತರನ್ನಾಗಿ ಮಾಡುತ್ತಿದೆ. ತೀವ್ರ ನೋವು ತರಿಸುತ್ತಿದೆ. ಗಾಯಗೊಂಡ ಪ್ರತಿಯೊಬ್ಬರಿಗೂ ಸರ್ಕಾರ ಎಲ್ಲಾ ನೆರವು ನೀಡಲಿದೆ. ಮೃತರ ಕುಟಂಬಸ್ಥರ ಸಂಕಷ್ಟದ ಸಮಯದಲ್ಲಿ ಅವರ ಜೊತೆ ಸರ್ಕಾರ ನಿಲ್ಲಲಿದೆ. ಸರ್ಕಾರಕ್ಕೆ ಇದು ಅತ್ಯಂತ ಗಂಭೀರ ಘಟನೆಯಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾರೆ.
ರೈಲು ದುರಂತದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾದ ಒಡಿಶಾ ಸರ್ಕಾರ, ರೈಲು ಅಧಿಕಾರಿಗಳು, ರಕ್ಷಣಾ ತಂಡಗಳು, ಸ್ಥಳೀಯರು ಅವಿರತ ಶ್ರಮವಹಿಸಿದ್ದಾರೆ. ರಕ್ತದಾನ, ಗಾಯಾಳುಗಳ ರಕ್ಷಣೆಯಲ್ಲಿ ಸ್ಥಳೀಯರು ಮುಂದೆ ನಿಂತು ಮಾಡಿದ್ದಾರೆ. ಇದರಿಂದ ರಕ್ಷಣಾ ಕಾರ್ಯದ ವೇಗ ಹೆಚ್ಚಾಗಿತ್ತು. ನಾನು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಬೇಟಿ ನೀಡಿದ್ದೇನೆ. ಗಾಯಾಳುಗಳ ಜೊತೆ ಮಾತನಾಡಿದ್ದೇನೆ. ಈ ಸಂದರ್ಭ ಅವರ ನೋವನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ. ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಈ ಸಂಕಷ್ಟದಿಂದ ಹೊರಬರಲು ಭಗವಂತ ಶಕ್ತಿ ನೀಡಲಿ ಎಂದು ಮೋದಿ ಹೇಳಿದ್ದಾರೆ.