ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ನಲ್ಲಿ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ರಾಮಾನುಜರ ಈ ʼಸಮಾನತೆಯ ಪ್ರತಿಮೆʼಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಹೈದರಾಬಾದ್ ಗೆ ಭೇಟಿ ನೀಡಲಿದ್ದಾರೆ.
ಸಮಾನತೆಯ ಪ್ರತಿಮೆಯ ವಿಶೇಷತೆ ಏನು?
- ರಾಮಾನುಜಾಚಾರ್ಯರ 1000ನೇ ವಾರ್ಷಿಕೋತ್ಸವದ ಅಂಗವಾಗಿ ಈ ಬೃಹತ್ ಪ್ರತಿಮೆ ನಿರ್ಮಾಣವಾಗಿದೆ.
- ಈ ಪ್ರತಿಮೆ ತೆಲಂಗಾಣದ ಮುಂಚಿಂತಲ್ ಎಂಬ ಹಳ್ಳಿಯಲ್ಲಿ ತಲೆ ಎತ್ತಲಿದೆ.
- ರಾಮಾನುಜರ ಮೂರ್ತಿಯ ವಿನ್ಯಾಸವನ್ನು ಚಿನ್ನ ಜೀಯರ್ ಸ್ವಾಮಿ ಅವರು ನೀಡಿದ್ದಾರೆ.
- 45 ಎಕರೆ ಸಂಕೀರ್ಣದಲ್ಲಿ ಈ ಐತಿಹಾಸಿಕ ರಾಮಾನುಜರ ಪ್ರತಿಮೆ ನಿರ್ಮಾಣಗೊಂಡಿದ್ದು, ಈ ಯೋಜನೆಗೆ 1000 ಕೋಟಿ ರೂ. ವೆಚ್ಚವಾಗಿದೆ.
- ರಾಮಾನುಜರ ಈ ಮೂರ್ತಿಯನ್ನು ಪಂಚಲೋಹಗಳಿಂದ ಮಾಡಲಾಗಿದೆ. ಇದು ವಿಶ್ವದ ಅತ್ಯಂತ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ.
- ಪ್ರತಿಮೆಯನ್ನು ಭದ್ರ ವೇದಿ ಎನ್ನುವ 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ.
- ಈ ಕಟ್ಟಡದಲ್ಲಿ ವೈದಿಕ ಲೈಬ್ರರಿ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಪಠ್ಯಗಳು, ರಂಗಮಂದಿರ, ರಾಮಾನುಜಾಚಾರ್ಯರ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಾಗಿ ಮೀಸಲಿಡಲಾಗಿದೆ.
- ಇದರ ಜತೆಗೆ ಇಲ್ಲಿ 120 ಕೆ.ಜಿ. ತೂಕದ ಚಿನ್ನದ ವಿಗ್ರಹವನ್ನು ಪ್ರತಿನಿತ್ಯದ ಪೂಜೆಗೆ ಸ್ಥಾಪಿಸಲಾಗುತ್ತದೆ.
- ರಾಮಾನುಜಾಚಾರ್ಯರ ಈ ಪ್ರತಿಮೆ ತಿರುಪತಿ, ಶ್ರೀರಂಗಂ, ದ್ವಾರಕಾ, ಬದರಿನಾಥ ಸೇರಿ ಮುಂತಾದ 108 ಪವಿತ್ರ ಕ್ಷೇತ್ರಗಳ ಮೂರ್ತಿಯನ್ನು ಹೋಲುತ್ತದೆ.
- ಇಂದಿನ ಈ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಸುಮಾರು 5,000 ಪುರೋಹಿತರು ಮತ್ತು ವೇದ ಪಂಡಿತರು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಮೋದಿ ಬೇಗಂಪೇಟೆ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಹೈದರಾಬಾದ್ ನಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನೀಡಲಾಗಿದ್ದು, ಸುಮಾರು 7 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದಾರೆ.