ಹೊಸದಿಗಂತ ವರದಿ ಶಿವಮೊಗ್ಗ :
ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ವತಿಯಿಂದ 3 ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನವನ್ನು ನಗರದ ಎನ್ಇಎಸ್ ಮೈದಾನದಲ್ಲಿ ಡಿ.25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಾಗರಣದ ಪ್ರಾಂತ ಸಂಚಾಲಕ ದೊ.ಕೇಶವಮೂರ್ತಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿ ಉದ್ಯಮಿ ಬೆಂಗಳೂರಿನ ರಾಮ್ ಮನೋಹರ್ ಶಾಂತವೇರಿ ಆಗಮಿಸಲಿದ್ದಾರೆ. ಜಾಗರಣದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಭೂಪಾಲ್ ಸಂಸದರಾದ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
16 ಜಿಲ್ಲೆಗಳಿಂದ ಸುಮಾರು ನಾಲ್ಕು ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಜಾತಿ ಮುಖಂಡರ ಸಭೆ ಹಾಗೂ ಪ್ರಜ್ಞಾವಂತರ ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಎಲ್ಲಾ ಸಮಾಜ ಬಾಂಧವರು ಈ ಸಮಾವೇಶಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ತೇಜಸ್ವಿ ಮಾತನಾಡಿ, ಹೊರ ಜಿಲ್ಲೆಗಳಿಂದ ಬರುವ ಎಲ್ಲಾ ಕಾರ್ಯಕರ್ತರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ. ಡಿ.24 ರಂದು ಸಂಜೆ ಎಲ್ಲಾ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಎಲ್ಲರೂ ನೋಂದಣಿ ಮಾಡಿಸಿಕೊಂಡು ಬರಲಿದ್ದಾರೆ. 25 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ, ಮಧ್ಯಾಹ್ನ 1.30 ರವರೆಗೆ 2 ಗೋಷ್ಠಿಗಳು ನಡೆಯಲಿವೆ. 2.30 ರಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.ಸಂಜೆ 4.30ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.