ಹೊಸದಿಗಂತ ವರದಿ, ಹಾವೇರಿ:
ಮೆಕ್ಕೆಜೋಳ ತುಂಬಿದ್ದ ಲಾರಿ ಪಲ್ಟಿ. ಲಾರಿಯಲ್ಲಿದ್ದ ಮೂವರು ಹಮಾಲರು ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವಪ್ಪಿದ ಘಟನೆ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ಸೋಮವಾರ ಜರುಗಿದೆ.
ಮೃತ ದುರ್ದೈವಿಗಳನ್ನು ಇಚ್ಚಂಗಿ ಗ್ರಾಮದ ಆನಂದ(೩೫), ಮಂಜು(೩೭) ಹಾಗೂ ಆನಂದ(೩೩) ಎಂದು ಗುರುತಿಸಲಾಗಿದೆ. ಹಾವೇರಿ ತಾಲೂಕಿನ ಇಚ್ಚಂಗಿ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಮೆಕ್ಕೆಜೋಳ ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಮೇಲೆ ಐದರಿಂದ ಆರು ಜನ ಹಮಾಲರು ಇದ್ದರೆಂದು ಹೇಳಲಾಗುತ್ತಿದ್ದು ಲಾರಿ ಪಲ್ಟಿ ಆಗುವದನ್ನು ಗಮನಿಸಿದ ಉಳಿದ ಹಮಾಲರು ಲಾರಿಯಿಂದ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಘಟನೆ ಜರುಗಿದ ನಂತರ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ತರು ಸೇರಿ ಜೆಸಿಬಿಯನ್ನು ಬಳಸಿ ಲಾರಿಯನ್ನು ಮೇಲೆತ್ತಿ ಮೆಕ್ಕೆಜೋಳ ಚೀಲಗಳನ್ನು ತಗೆದು ಚೀಲಗಳಡಿಯಲ್ಲಿದ್ದ ಮೃತ ದೇಹಗಳನ್ನು ಹೊರತಗೆದಿರುವರು.
ಲಾರಿಯಿಂದ ಜೀಗಿದು ಹಮಾಲಿಗಳಲ್ಲಿ ಓರ್ವ ತೀವವಾಗಿ ಗಾಯಗೊಂಡಿದ್ದು ಇವನ ಸ್ಥಿತಿ ಚಿಂತಾಜನಕವಾಗಿದೆ. ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
>> ಮಮ್ಮಲಮರುಗಿದ ಸ್ಥಳೀಯರು
ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹಮಾಲಿಗರು ಲಾರಿಯಡಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದನ್ನು ಕಂಡು ನೆರೆದ ನೂರಾರು ಜನತೆ ಮಮ್ಮಲಮರುಗಿದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.