ಚಿರತೆ ದಾಳಿಗೆ ಮೂರು ಕುರಿಗಳು ಬಲಿ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ

ಹೊಸದಿಗಂತ ವರದಿ ಮಂಡ್ಯ: ಕುರಿ ಕೊಟ್ಟಿಗೆ ಮೇಲೆ ದಾಳಿ ನಡೆಸಿರುವ ಚಿರತೆ ಮೂರು ಕುರಿಗಳನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ತಂಡಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಂಕುಂದಸ್ವಾಮಿ ಎಂಬುವರಿಗೆ ಸೇರಿದ ಕುರಿ ಕೊಟ್ಟಿಗೆಗೆ ಮುಂಜಾನೆ ದಾಳಿ ನಡೆಸಿರುವ ಚಿರತೆ ಮೂರು ಕುರಿಗಳನ್ನು ಕೊಂದು, ಎರಡು ಕುರಿಗಳನ್ನು ಗಾಯಗೊಳಿಸಿ ಪರಾರಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆ ಹಿಡಿಯಲು ಗ್ರಾಮದ ಹೊರ ವಲಯದಲ್ಲಿ ಬೋನನ್ನು ಇಡಲಾಗಿದೆ.