ಹಿಜಾಬ್ ಬೇಕೆಂದು ಪಟ್ಟು ಹಿಡಿದ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಉಡುಪಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ಮೂವರು ಶನಿವಾರದ ಗಣಿತಶಾಸ್ತ್ರ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಲ್ಮಾಸ್ ಎ.ಎಚ್., ಹಝ್ರಾ ಶಿಫಾ ಮತ್ತು ಆಯಿಷಾ ಪಲ್ಲವ್ಕರ್ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇವರಲ್ಲಿ ಅಲ್ಮಾಸ್ ಶುಕ್ರವಾರ ಸಂಜೆ ಕಾಲೇಜಿಗೆ ಆಗಮಿಸಿ ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ. ಆದರೆ ಉಳಿದ ಇಬ್ಬರು ಇಂದು ಬೆಳಗ್ಗೆಯೂ ಹಾಲ್ ಟಿಕೆಟ್ ತೆಗೆದುಕೊಂಡಿಲ್ಲ.

ಅಲ್ಮಾಸ್ ಹಾಲ್ ಟಿಕೆಟ್ ಪಡೆದುಕೊಂಡಿದ್ದರೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಿರುವುದರಿಂದ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ. ಹಾಗಾಗಿ ಈ ಮೂವರು ವಿದ್ಯಾರ್ಥಿನಿಯರು ಇಂದಿನ ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.‌ ನಿನ್ನೆ ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಹಾಗೂ ರೇಶಮ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮನೆಗೆ ಹಿಂದಿರುಗಿದ್ದರು.

ಈ ಘಟನೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿ, ಈ ವಿದ್ಯಾರ್ಥಿನಿಯರು ನಾಳೆಯೂ ಪರೀಕ್ಷಾ ಕೇಂದ್ರಕ್ಕೆ ಹೋಗಿ ನಾಟಕ ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!