ಹೊಸದಿಗಂತ ವರದಿ, ಮೈಸೂರು:
ದನಮೇಯಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದಲ್ಲಿ ನಡೆದಿದೆ.
ದಾಸಯ್ಯ ಎಂಬುವರು ಹುಲಿ ದಾಳಿಯಿಂದ ಗಾಯಗೊಂಡವರು. ಗ್ರಾಮದ ಹೊರವಲಯದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಹಠಾತ್ತನೆ ಹಲಿ ದಾಳಿ ನಡೆಸಿದೆ, ಇವರ ಕಿರುಚಾಟ ಕೇಳಿದ ಹತ್ತಿರದಲ್ಲಿದ್ದ ಇತರರು ಜೋರಾಗಿ ಕೂಗಿ ಕೊಂಡು, ಸದ್ದು ಮಾಡಿ, ಕಲ್ಲುಗಳನ್ನು ಬೀಸಿದ ಕಾರಣ ಹುಲಿ ದಾಸಯ್ಯರನ್ನು ಬಿಟ್ಟು ಪರಾರಿಯಾಗಿದೆ. ತಲೆ ಹಿಂಭಾಗ, ಕಿವಿ, ಕತ್ತಿನಲ್ಲಿ ಹುಲಿಯ ದಾಳಿಯಿಂದ ಗಾಯಗಳಾಗಿ ರಕ್ತ ಸೋರುತ್ತಿದ್ದ ದಾಸಯ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದರು. ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದರು.