ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಳಿಮಾತೆಯನ್ನು ‘ಮಾಂಸ ಭಕ್ಷಿಸುವ ಮತ್ತು ಅಲ್ಕೊಹಾಲ್ ಸ್ವೀಕರಿಸುವ ದೇವತೆ’ ಎಂದು ಕರೆದಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಮ್ಮ ಆ ನಿಲುವನ್ನು ಸಮರ್ಥಿಸಿಕೊಂಡಿದ್ದು, ಒಂದು ವೇಳೆ ನಾನು ಹೇಳಿದ್ದು ತಪ್ಪಾಗಿದ್ದರೆ ಅದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದೇವಿಗೆ ಸಾಮಾನ್ಯವಾಗಿ ಮಾಂಸ ಮತ್ತು ಮದ್ಯವನ್ನು ನೈವೇದ್ಯ ನೀಡಿ ಪೂಜಿಸಲಾಗುವುದು. ಬಿಜೆಪಿಯು ತನ್ನ ಸೀಮಿತ ಹಿಂದುತ್ವದ ಕಲ್ಪನೆಯನ್ನು ಆಧರಿಸಿ ಪೋಸ್ಟರ್ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದರು.
ಸಾಕ್ಷ್ಯಚಿತ್ರದಲ್ಲಿನ ಕಾಳಿ ದೇವಿಯ ಧೂಮಪಾನದ ಪೋಸ್ಟರ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಬಿಜೆಪಿಯ ತಪ್ಪು ಕಲ್ಪನೆಯ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
‘ನಾನು ಹೇಳುತ್ತಿರುವುದು ತಪ್ಪು ಎಂದು ಬಿಜೆಪಿ ಸಾಬೀತುಪಡಿಸಲಿ. ಅವರು ನನ್ನ ವಿರುದ್ಧ ಪಶ್ಚಿಮ ಬಂಗಾಳದ ಎಲ್ಲಿ ಬೇಕಾದರೂ ಕೇಸ್ ಹಾಕಲಿ. ಆದರೆ, ಅವರು ಎಲ್ಲೇ ನನ್ನ ವಿರುದ್ಧ ದೂರು ದಾಖಲಿಸಿದರೂ ಅಲ್ಲಿಂದ 5 ಕಿಲೋಮೀಟರ್ ಒಳಗೆ ಮಾಂಸ ಮತ್ತು ಮದ್ಯದ ನೈವೇದ್ಯ ಸ್ವೀಕರಿಸುವ ಕಾಳಿಮಾತೆಯ ದೇವಸ್ಥಾನ ಇದ್ದೇ ಇರುತ್ತದೆ. ನನ್ನದೇ ರಾಜ್ಯದಲ್ಲಿ ನನ್ನ ವಿರುದ್ಧ ಅವರು ಕ್ರಮ ತೆಗೆದುಕೊಳ್ಳುವುದನ್ನು ನಾನು ನೋಡಬಯಸುತ್ತೇನೆ’ ಎಂದು ಮಹುವಾ ಹೇಳಿದ್ದಾರೆ.
ದೇಶದಲ್ಲಿ ಇನ್ನೂ ಅನೇಕ ದೇವಾಲಯಗಳು ಇವೆ. ಮಧ್ಯಪ್ರದೇಶ ಉಜ್ಜಯಿನಿಯ ಕಾಲಭೈರವ ದೇವಸ್ಥಾನ ಮತ್ತು ಕಾಮಾಖ್ಯ ದೇವಸ್ಥಾನಗಳು ನನ್ನ ಹೇಳಿಕೆಗೆ ಬಲವಾದ ಸಾಕ್ಷಿಗಳಾಗಿವೆ. ನಾನು ತಪ್ಪು ತಿಳಿದಿಲ್ಲ ಎಂಬ ಸತ್ಯ ನನಗೆ ಗೊತ್ತಿದೆ ಮತ್ತು ನಾನು ತಪ್ಪು ಮಾಡಿದ್ದರೆ ಹಾಗಂತ ಪ್ರೂವ್ ಮಾಡಲಿ ಎಂದು ಸಂಸದೆ ಮೊಯಿತ್ರಾ ಸವಾಲು ಹಾಕಿದ್ದಾರೆ.