ನಾಡಗೀತೆಗೆ ಅವಮಾನ ಆರೋಪ: ರೋಹಿತ್ ಚಕ್ರತೀರ್ಥ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನಾಡಗೀತೆಯನ್ನು ತಿರುಚಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಅಸಲಿಗೆ ನಾಡಗೀತೆಗೆ ಅವಮಾನ ಮಾಡಿದ್ದು ಯಾರು? ಈ ಬಗ್ಗೆ ಚಕ್ರತೀರ್ಥ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ರಾಷ್ಟ್ರಕವಿ ಕುವೆಂಪು ಅವರ ವಿಚಾರವನ್ನು ಮುಂದಿಟ್ಟುಕೊಂಡು ಒಂದಷ್ಟು ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಅವುಗಳಲ್ಲಿ ಒಂದು, ಕುವೆಂಪು ಅವರು ಬರೆದಿರುವ ನಾಡಗೀತೆಗೆ ನಾನು ಅವಮಾನ ಮಾಡಿದ್ದೇನೆ ಎಂಬುದನ್ನು ಕುರಿತಾದದ್ದು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ಮತ್ತು ಚಿತ್ರಗಳನ್ನು ತೋರಿಸುವ ಹಲವಾರು ಪೋಸ್ಟರುಗಳು, ಚಿತ್ರಗಳು ಓಡಾಡುತ್ತಿವೆ. ನಾನು ಕುವೆಂಪು ಅವರ ಸಾಹಿತ್ಯವನ್ನು ಅತ್ಯಂತ ಪ್ರೀತಿ, ಗೌರವಗಳಿಂದ ಓದಿಕೊಂಡು ಬಂದಿದ್ದು ಯಾವುದೇ ಕಾರಣಕ್ಕೂ ಆ ಮಹಾಕವಿಗೆ ಆಗೌರವ ಸೂಚಿಸುವ ಪ್ರಶ್ನೆಯೇ ಇಲ್ಲ.

2017ರಲ್ಲಿ ಸನ್ಮಾನ್ಯ ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷವು ಆಡಳಿತಾರೂಢವಾಗಿದ್ದಾಗ ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಆರೇಬಿಕ್ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಾಗ ಅವರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶದ ಒಂದು ಭಾಗವಾಗಿ ಯಾರೋ ಒಬ್ಬರು ನಾಡಗೀತೆಯ ಧಾಟಿಯಲ್ಲಿ ನಾಲ್ಕು ಸಾಲುಗಳನ್ನು ಬರೆದು ಅಲ್ಲಿ ಆಗಿನ ಕಾಲದ ಸರಕಾರದ ನಡೆಯನ್ನು ಪ್ರಶ್ನಿಸಿದ್ದರು. ವಾಟ್ಸಾಪ್ ಮೂಲಕ ಬಂದಿದ್ದ ಆ ಬರಹವನ್ನು ನಾನು ಫೇಸ್‌ಬುಕ್ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಇದು ವಾಟ್ಸಾಪ್‌ನಲ್ಲಿ ಬಂದ ಬರಹ ಎಂಬುದನ್ನು ಆ ಪೋಸ್ಟಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೆ. ಆದರೆ ಕೆಲವೊಂದು ವ್ಯಕ್ತಿಗಳು ನನ್ನ ಪೋಸ್ಟನ್ನು ತಮಗೆ ಬೇಕಾದಂತೆ ಬಳಸಿಕೊಂಡು, ನಾನು ಕುವೆಂಪು ಅವರಿಗೂ ನಾಡಗೀತೆಗೂ ಅವಮಾನ ಮಾಡಿದ್ದೇನೆಂದು ಬಿಂಬಿಸಿದರು. ಜೊತೆಗೆ ಪೊಲೀಸ್ ಠಾಣೆಯಲ್ಲೂ ಪ್ರಕರಣವನ್ನು ದಾಖಲಿಸಿದರು.

ಪೊಲೀಸರು ವಿಚಾರಣೆಗೆ ಕರೆದಾಗ ನಾನು ಅವರಿಗೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆ. ವಾಸ್ತವವನ್ನು ಮನಗಂಡ ಪೊಲೀಸರು, ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಕೈಬಿಟ್ಟಿದ್ದರು. ಹಾಗಾಗಿ ಇದು ಪೊಲೀಸ್ ಇಲಾಖೆಯಲ್ಲಿ ಮಾತುಕತೆಯ ಮೂಲಕ ಬಗೆಹರಿದಿದ್ದ ಸಮಸ್ಯೆ. ಆದರೆ ಕೆಲವು ವಿರೋಧಿ ಶಕ್ತಿಗಳು ಈಗ ಪಠ್ಯಪುಸ್ತಕಗಳು ಶಾಲೆಗಳಿಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಹಳೆಯ ವಿಚಾರವನ್ನು ಮತ್ತೆ ಕೆದಕಿ ವಿವಾದವಾಗಿಸಲು ಪ್ರಯತ್ನಿಸುತ್ತಿರುವುದು ವಿಷಾದನೀಯ.

ಯಾವುದೇ ಕಾರಣಕ್ಕೂ ನಾನು ನಾಡಗೀತೆಯನ್ನು ಅವಮಾನಿಸುವ ಯೋಚನೆ ಮಾಡುವುದೂ ಇಲ್ಲ. ಈ ಪ್ರಕರಣವನ್ನು ಹಲವಾರು ಶಕ್ತಿಗಳು ತಮ್ಮ ತಮ್ಮ ಸ್ವಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ಹಲವು ಸುಳ್ಳು ಸಾಲುಗಳನ್ನು, ಚಿತ್ರಗಳನ್ನು ಹಾಕಿ, ಅಲ್ಲೆಲ್ಲ ನಾನು ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದೇನೆಂದು ಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ. ಆ ಮೂಲಕ ಪ್ರಕರಣವು ರಾಜಕೀಯ ತಿರುವುಗಳನ್ನು ಪಡೆಯಬೇಕೆಂದು ಕೆಲವರು ಬಯಸುತ್ತಿರುವುದೂ ಸ್ಪಷ್ಟವಾಗುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ನಾನು ಹೇಳಬಯಸುವುದೇನೆಂದರೆ, ಕುವೆಂಪು ಅವರ ವ್ಯಕ್ತಿತ್ವಕ್ಕಾಗಲೀ ಬರಹಕ್ಕಾಗಲೀ ಯಾವುದೇ ಅವಮಾನ ಮಾಡುವಂಥ ಯಾದ ಉದ್ದೇಶವೂ ನನಗಿಲ್ಲ. ಕುವೆಂಪು ಅವರ ಬರಹಗಳನ್ನು ಶಾಲಾದಿನಗಳಿಂದಲೂ ಓದಿಕೊಂಡು ಬಂದವನು ನಾನು, ಅವರ ಶ್ರೀರಾಮಾಯಣ ದರ್ಶನಮ್ ಮಹಾಕಾವ್ಯದ ಕೆಲವು ವಿಶಿಷ್ಟ ಪಾತ್ರಗಳ ಬಗ್ಗೆ ಉಪನ್ಯಾಸಗಳನ್ನು ಮಾಡಿದವನು, ಬರಹಗಳನ್ನು ಬರೆದವನು ನಾನು, ವರಕವಿ ದ. ರಾ. ಬೇಂದ್ರೆ ಮತ್ತು ರಾಷ್ಟ್ರಕವಿ ಕುವೆಂಪು – ಈ ಇಬ್ಬರು ಕನ್ನಡ ನೆಲದ ಗಂಗೆ-ಕಾವೇರಿಯರು ಎಂದು ಶೀರ್ಷಿಕೆ ಕೊಟ್ಟು ಅಂಕಣವನ್ನು ಬರೆದವನು ನಾನು, ನನ್ನ ಕನ್ನಡ ನೆಲದಲ್ಲಿ, ನನ್ನ ಕನ್ನಡ ಭಾಷೆಯ ಅತ್ಯುತ್ತಮ ಸಾಹಿತಿಯೊಬ್ಬರ ಬಗ್ಗೆ ಕನ್ನಡ ಪ್ರೀತಿಯುಳ್ಳವನಾದ ನಾನು ಸಮರ್ಥಿಸಿಕೊಂಡು ಮಾತಾಡಬೇಕಾದ ಪರಿಸ್ಥಿತಿ ಇದೆ ಎನ್ನುವುದು ನಿಜಕ್ಕೂ ದುರಂತ. ಕುವೆಂಪು ಅವರ ಮೇಲೆ ಅಪಾರ ಗೌರವವಿದ್ದುದಕ್ಕಾಗಿಯೇ ನಮ್ಮ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅವರ ಅತ್ಯುತ್ತಮ ಶಿಶುಸಾಹಿತ್ಯವಾದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಯನ್ನು ಪಾಠವಾಗಿ ಅಳವಡಿಸಿದೆ. ಅವರ ಸಾಹಿತ್ಯವು 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದಲೇ ಕುವೆಂಪು ಅವರ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಕೆಲಸವನ್ನು ಮಾಡಲಾಗಿದೆ.

ಈ ವಿಚಾರಗಳನ್ನು ಗಮನಿಸದೆ ಏಕಾಏಕಿಯಾಗಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿ, ತೇಜೋವಧೆ ಮಾಡುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ಬೇಸರ ತರುವ ಸಂಗತಿ ನನ್ನನ್ನು ಕುವೆಂಪು ವಿರೋಧಿ ಎಂಬ ರೀತಿಯಲ್ಲಿ ನಾಡಿನಾದ್ಯಂತ ಬಿಂಬಿಸಲು ನೋಡುತ್ತಿರುವುದು ನನಗಂತೂ ಮನಸ್ಸಿಗೆ ಘಾಸಿಯನ್ನು ಮಾಡಿದೆ. ನನ್ನ ಕನ್ನಡಪ್ರೀತಿ, ಕುವೆಂಪು ಪ್ರೀತಿ ಪ್ರಶ್ನಾತೀತವಾಗಿದೆ, ಯಾರೋ ಬರೆದ ಸಾಲುಗಳನ್ನು, ಅವು ಬೇರೆಯವರದು ಎಂದು ನಾನೇ ಸ್ವತಃ ಉಲ್ಲೇಖಿಸಿದ್ದ ಹೊರತಾಗಿಯೂ, ನನ್ನದೇ ಎಂಬಂತೆ ಬಿಂಬಿಸಿ ನನ್ನ ವ್ಯಕ್ತಿತ್ವಕ್ಕೆ ಅಪಚಾರ ಮಾಡುವ ಕೆಲಸವನ್ನು ಮಾಡುತ್ತಿರುವವರ ಬಗ್ಗೆ ನನಗೆ ಅಪಾರ ದುಃಖ, ಬೇಸರಗಳಿವೆ. ರಾಜಕೀಯ ಹಿತಾಸಕ್ತಿಗಳಿಗಾಗಿ ಹೀಗೆ ಓರ್ವ ಕನ್ನಡಿಗನನ್ನು, ಕನ್ನಡದ ಸಾಹಿತಿಯನ್ನು, ಕನ್ನಡಪ್ರೀತಿಯುಳ್ಳ ಭಾರತೀಯನನ್ನು ಹೀಗೆ ದಯವಿಟ್ಟು ಯಾರೂ ತೇಜೋವಧೆ ಮಾಡಿ ಹಣಿಯಲು ನೋಡಬಾರದೆಂದೇ ನನ್ನ ಪ್ರಾರ್ಥನೆ. ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿಗಳಾದ ಸ್ವಾಮಿ ನಿರ್ಮಲಾನಂದರು ಹೇಳಿರುವಂತೆ ಕುವೆಂಪು ಅವರು ಬರೆದಿರುವ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲಿ. ಅವರನ್ನು ಪತ್ತೆಹಚ್ಚುವ ಕೆಲಸವನ್ನು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸುತ್ತೇನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!