ಹೊಸದಿಗಂತ ಡಿಜಿಟಲ್ ಡೆಸ್ಕ್
ಶುಕ್ರವಾರ ಉತ್ತರ ಪ್ರದೇಶದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದ ಪೇಜಾವರ ಶ್ರೀಗಳಿಗೆ ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಕೆಲಕಾಲ ಸಂಕಷ್ಟ ಉಂಟುಮಾಡಿತ್ತು.
ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾಗವಹಿಸಲು ಭಾರೀ ಸಂಖ್ಯೆಯ ಜನಸ್ತೋಮ ಎಲ್ಲೆಡೆಯಿಂದ ಹರಿದುಬಂದ ಪರಿಣಾಮ ಹಾದಿಯುದ್ದಕ್ಕೂ ವಾಹನ ದಟ್ಟಣೆ ಕಾಣಿಸಿಕೊಂಡಿತ್ತು. ಆದರೆ ಇದಕ್ಕೆಲ್ಲಾ ಧೃತಿಗೆಡದ ಶ್ರೀಗಳು ತಮ್ಮ ವಾಹನದಿಂದ ಇಳಿದು ಬರೋಬ್ಬರಿ ಎರಡು ಕಿಲೋ ಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ ಮೂಲಕ ಎಲ್ಲರನ್ನು ಅಚ್ಚರಿಗೀಡುಮಾಡಿದರು. ಜೊತೆಗೆ ತಾವು ಪ್ರತಿಷ್ಠಿತ ಪೀಠಾಧಿಪತಿಯಾಗಿದ್ದರೂ ಜನಸಾಮಾನ್ಯರೊಂದಿಗೆ ಜನಸಾಮಾನ್ಯರಾಗಿ ಬೆರೆತು ಮಾದರಿಯಾದರು.