ಹೊಸದಿಗಂತ ವರದಿ, ಮೈಸೂರು:
ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಅವರು ಮಹದೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ಬಳಿಕ ತಮ್ಮ ಪುತ್ರ ರಾಹುಲ್ ಗಾಂಧಿಯೊoದಿಗೆ ಅರಣ್ಯದಲ್ಲಿ ಸಫಾರಿ ನಡೆಸಿದರು.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಆರೆಂಜ್ ಕೌಂಟಿ ರೆಸಾರ್ಟ್ನಲ್ಲಿ ಕಳೆದ ಎರಡು ದಿನಗಳಿಂದ ಬೀಡು ಬಿಟ್ಟು ವಿಶ್ರಾಂತಿ ಪಡೆಯುತ್ತಿರುವ ಸೋನಿಯಾಗಾಂಧಿ ಅವರು, ಎಚ್.ಡಿ.ಕೋಟೆ ತಾಲೂಕಿನ ಭೀಮನ ಕೊಲ್ಲಿಯಲ್ಲಿರುವ ಉದ್ಬವ ಮೂರ್ತಿ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಕೆಲಕಾಲ ದೇವಸ್ಥಾನದಲ್ಲಿ ಕುಳಿತು ಧ್ಯಾನ ಮಾಡಿದರು. ಬಳಿಕ ನಾಗರಹೊಳೆ ಅರಣ್ಯದಲ್ಲಿ ಸಫಾರಿ ನಡೆಸಿ, ವನ್ಯ ಜೀವಿಗಳನ್ನು, ವನ್ಯ ಸಂಪತ್ತನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು ಮತ್ತಿತರರು ಸಾಥ್ ನೀಡಿದರು.
ಗಾಯಗೊಂಡಿರುವ ಆನೆ ಮರಿಗೆ ಚಿಕಿತ್ಸೆ ಕೊಡಿಸಿ:
ಸಫಾರಿ ಮುಗಿಸಿ ಬಂದಿರುವ ರಾಹುಲ್ ಗಾಂಧಿ ಅವರು ನಾಗರಹೊಳೆ ಅರಣ್ಯದಲ್ಲಿ ತಾಯಿಯೊಂದಿಗೆ ಇರುವ ಚಿಕ್ಕ ಆನೆ ಮರಿಯೊಂದರ ಸೋಂಡಿಲು ಹಾಗೂ ಬಾಲಕ್ಕೆ ತೀವ್ರ ಗಾಯವಾಗಿದೆ. ಅದು ಗಾಯದಿಂದ ಬಳಲುತ್ತಿದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದರೆ ಅದು ಬದುಕಿ ಉಳಿಯುವ ಸಾಧ್ಯತೆಯಿದೆ. ಹಾಗಾಗಿ ಅದಕ್ಕೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿ, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಟ್ವಿಟ್ವರ್ನಲ್ಲಿ ಗಾಯಗೊಂಡಿರುವ ಮರಿಯಾನೆ ಹಾಗೂ ಅದರೊಂದಗಿರುವ ತಾಯಿ ಆನೆಯ ಪೋಟೋವನ್ನು ಹಾಕಿ ಮನವಿ ಮಾಡಿದ್ದಾರೆ.