ಹೊಸದಿಗಂತ ವರದಿ ಹುಬ್ಬಳ್ಳಿ:
ದೇಶದಲ್ಲಿ ಕಾಂಗ್ರೆಸ್ ಅವನತಿಗೆ ಇಬ್ಬರು ಸಿದ್ದುಗಳು ಕಾರಣ, ಒಬ್ಬರು ಪಂಜಾಬಿನ ಸಿದ್ದು ಮತ್ತೊಬ್ಬರು ರಾಜ್ಯದಲ್ಲಿನ ಸಿದ್ದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹೆಸರಿನಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲು ಹೊರಟಿದ್ದಾರೆ. ಇದುವೇ ಕಾಂಗ್ರೆಸ್ ನವರಿಗೆ ದೊಡ್ಡ ವಿಷಯವಾಗಿದೆ. ಕಾಂಗ್ರೆಸ್ ನವರಿಗೆ ಜನರ ಸಮಸ್ಯೆಗಳು ಬೇಕಾಗಿಲ್ಲ. ಅವರಿಗೆ ಸಮಯವು ಇಲ್ಲ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅದ್ದೂರಿಯಾಗಿ ಮಾಡುವುದು ಅವರಿಗೆ ಬಿಟ್ಟ ವಿಚಾರ, ಈ ಹಿಂದೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸಾವಿರ ಮತಗಳಿಂದ ಗೆದ್ದವರು. ಅಲ್ಲಿ ಏನಾದರೂ ಸೋತ್ತಿದ್ದರೇ ಅವರ ರಾಜಕೀಯ ಜೀವನವೇ ಇತಿಶ್ರೀ ಆಗುತ್ತಿತ್ತು. ಅಲ್ಲಿ ಗೆದ್ದರೂ ಕೂಡ ಚಾಮುಂಡೇಶ್ವರಿಯಲ್ಲಿ 30 ಸಾವಿರ ಅಂತರದಿಂದ ಸೋಲು ಕಂಡಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ ತಮಗೆ ಒಕ್ಕಲಿಗರ ಮತಗಳು ಬೀಳುತ್ತವೆ ನಾನು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದರೇ, ಹಿಂದುಳಿದ ವರ್ಗದವರ ಮತ ನನಗೆ ಬೀಳುತ್ತವೆ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ. ಇವರಿಬ್ಬರ ಒಳ ಹೋರಾಟದಿಂದಲೇ ಕಾಂಗ್ರೇಸ್ ನ ಅವನತಿ ಪ್ರಾರಂಭವಾಗಲಿದೆ ಎಂದರು.