ಪೇಶಾವರದಲ್ಲಿ ಇಬ್ಬರು ಸಿಖ್ಖರ ದಾರುಣ ಹತ್ಯೆ: ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಪೇಶಾವರದಲ್ಲಿ ಇಬ್ಬರು ಸಿಖ್ಖರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಮೃತರನ್ನು ಕುಲ್ಜೀತ್ ಸಿಂಗ್ (42) ಮತ್ತು ರಂಜಿತ್ ಸಿಂಗ್ (38) ಎಂದು ಪೊಲೀಸರು ಗುರುತಿಸಿದ್ದಾರೆ. ಅಂಗಡಿಯೊಂದರಲ್ಲಿ ಕುಳಿತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ಸಿಖ್ಖರ ಹತ್ಯೆಯ ನಂತರ ಪೇಶಾವರದಲ್ಲಿ ಗಲಭೆಗಳನ್ನು ತಡೆಯಲು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಇಬ್ಬರು ಸಿಖ್ಖರ ಹತ್ಯೆಯು ದುರಂತವಾಗಿದ್ದು, ಹಂತಕರನ್ನು ಬಿಡುವುದಿಲ್ಲ ಎಂದು ಖಾನ್ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮಂಜಿಂದರ್ ಸಿರ್ಸಾ ಮಾತನಾಡಿ, ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿರುವ ಸಿಖ್ಖರಿಗೆ ಪೇಶಾವರ ತೊರೆಯುವಂತೆ ಬೆದರಿಕೆ ಹಾಕಲಾಗುತ್ತಿದ್ದು, ಈ ವಿಷಯವನ್ನು ಪದೇ ಪದೇ ಪಾಕಿಸ್ತಾನ ಸರ್ಕಾರದ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿರ್ಸಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಸಿಖ್ಖರ ಹಕ್ಕುಗಳನ್ನು ಸರ್ಕಾರವು ಕಸಿಯುತ್ತಿದೆ ಎಂದು ಸಿರ್ಸಾ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ಭಾರತ ಸರ್ಕಾರವು ಪಾಕಿಸ್ತಾನದಲ್ಲಿರುವ ಹೈಕಮಿಷನ್ ಅನ್ನು ಸಂಪರ್ಕಿಸಬೇಕು ಮತ್ತು ಸ್ಪಷ್ಟನೆಗಾಗಿ ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರಿಯನ್ನು ಕರೆಸಬೇಕು ಎಂದು ಮಂಜಿಂದರ್ ಸಿರ್ಸಾ ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!