ಹೊಸದಿಗಂತ ವರದಿ, ಮಡಿಕೇರಿ:
ಉಕ್ರೇನ್’ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತಿದ್ದ ಕುಶಾಲನಗರದ ಬಿ.ಕೆ.ಲಿಖಿತ್ ಮತ್ತು ಚಂದನ್ ಗೌಡ ಅವರುಗಳು ಸುರಕ್ಷಿತವಾಗಿ ಮನೆ ತಲುಪಿದ್ದು, ಪೋಷಕರಲ್ಲಿ ಹರ್ಷ ತುಂಬಿದೆ.
ಕೇಂದ್ರ ಸರ್ಕಾರದ ‘ಆಪರೇಷನ್ ಗಂಗಾ’ ಮೂಲಕ ವಿಶೇಷ ವಿಮಾನದಲ್ಲಿ ಉಕ್ರೇನ್’ನಿಂದ ದೆಹಲಿ ತಲುಪಿದ್ದ ಈ ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ಕುಶಾಲನಗರಕ್ಕೆ ಬಂದಿಳಿದಿದ್ದಾರೆ. ಕುಶಾಲನಗರದಲ್ಲಿ ಅವರು ಪೋಷಕರೂ ಸೇರಿದಂತೆ ಅನೇಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕುಶಾಲನಗರ ಕೂಡ್ಲೂರುವಿನ ಚಂದನ್ ಗೌಡ ಹಾಗೂ ಗುಮ್ಮನಕೊಲ್ಲಿಯ ಬಿ.ಕೆ.ಲಿಖಿತ್ ಅವರುಗಳು ರಷ್ಯಾದ ದಾಳಿಯಿಂದ ತಪ್ಪಿಸಿಕೊಳ್ಳಲು ಕಳೆದ ಒಂದು ವಾರದಿಂದ ಉಕ್ರೇನ್’ನ ಕಾರ್ಕೀವ್ ನಗರದ ತಮ್ಮ ಫ್ಲ್ಯಾಟ್ ಹಾಗೂ ಬಂಕರ್’ನಲ್ಲಿ ಕಳೆದ ಒಂದು ವಾರದಿಂದ ರಕ್ಷಣೆ ಪಡೆದಿದ್ದರು.
ಕಾರ್ಕೀವ್’ನಲ್ಲಿ ರಷ್ಯಾದ ದಾಳಿ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಅಲ್ಲಿರುವ ಭಾರತೀಯರು ಆ ಪ್ರದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ನೀಡಿದ ಸೂಚನೆಯಂತೆ ಅಲ್ಲಿಂದ ಹೇಗಾದರೂ ಪಾರಾಗಿ ಭಾರತ ತಲುಪಬೇಕೆಂದು ನಿರ್ಧರಿಸಿದ ಈ ವಿದ್ಯಾರ್ಥಿಗಳು ಆನ್’ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡಿ, ಕರ್ಪ್ಯೂ ಸಡಿಲಗೊಂಡ ತಕ್ಷಣ ದೊರೆತ ಕಾರ್ಕೀವ್ ರೈಲ್ವೆ ನಿಲ್ದಾಣದಿಂದ ಲಿವಿವ್ ಮೂಲಕ ಪೋಲೆಂಡ್ ತಲುಪಿದ್ದರು.
ಅಲ್ಲಿಂದ ‘ಆಪರೇಷನ್ ಗಂಗಾ’ದ ವಿಶೇಷ ವಿಮಾನದಲ್ಲಿ ಗುರುವಾರ ದೆಹಲಿ ತಲುಪಿದ ಚಂದನ್ ಹಾಗೂ ಲಿಖಿತ್ ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ಶುಕ್ರವಾರ ಬೆಳಗ್ಗೆ ಕುಶಾಲನಗರ ತಲುಪಿದ್ದಾರೆ.