ಆಸ್ತಿ ವಿವಾದ, ಜೋಡಿ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಆಸ್ತಿ ವಿವಾದದಲ್ಲಿ ಶುರುವಾದ ಜಗಳ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. ಕೋರ್ಟ್‌ನಲ್ಲಿ ಹಾಕಿರುವ ಪ್ರಕರಣ ಹಿಂಪಡೆಯದಿದ್ದಕ್ಕೆ ದಾಯಾದಿಗಳು ತಾಯಿ ಮಗಳನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಕೃಷ್ಣಾಜಿಲ್ಲೆಯ ಗುಡೂರು ವಲಯದ ಪೋಸಿನವಾರಿಪಾಲೆಯಲ್ಲಿ ನಡೆದಿದೆ. ಶಾಂತಮ್ಮ (76) ಎಂಬುವವರ ಕುಟುಂಬ ಸದಸ್ಯರ ಮೇಲೆ ಇಂದು ಬೆಳಗ್ಗೆ ವಿರೋಧಿಗಳು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಶಾಂತಮ್ಮ ಹಾಗೂ ಅವರ ಪುತ್ರಿ ರೂಪ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಬಂದರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ತೀರ್ಮಾನಕ್ಕೆ ಬಂದಿದ್ದಾರೆ.

ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸೋದರ ಸಂಬಂಧಿಗಳ ಆಸ್ತಿ ವಿವಾದದಲ್ಲಿ ಸಿಲುಕಿದ್ದ ಶಾಂತಮ್ಮನ ಕುಟುಂಬಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಪ್ರಕರಣವನ್ನು ನ್ಯಾಯಾಲಯದಿಂದ ಹಿಂಪಡೆಯಬೇಕು ಎಂದು ಮಲ್ಲೇಶ್ವರ ರಾವ್ ಕುಟುಂಬದವರು ಒತ್ತಾಯಿಸಿದ್ದಾರೆ. ಇದಕ್ಕೆ ಶಾಂತಮ್ಮನ ಕುಟುಂಬಸ್ಥರು ಒಪ್ಪದ ಕಾರಣ ಚಿಂತಲ ಕೊಂಡಯ್ಯ, ಪೋಸಿನ ಮಲ್ಲೇಶ್ವರ ರಾವ್, ಪೋಸಿನ ಸಾಂಬಶಿವರಾವ್, ಪೋಸಿನ ಸಹದೇವುಡು ಹಲವರನ್ನು ಕರೆತಂದು ಶಾಂತಮ್ಮ ಕುಟುಂಬದವರ ಮೇಲೆ ಚಾಕು, ರಾಡ್‌ಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!