ಹೊಸದಿಗಂತ ವರದಿ,ಚಿತ್ರದುರ್ಗ:
ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ಹಿಂದೂ ಟೈಲರ್ ಕನ್ನಯ್ಯಲಾಲ್ ಎಂಬುವವರನ್ನು ಹಾಡುಹಗಲೇ ಕೊಲೆ ಮಾಡಿರುವ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಆನೆ ಬಾಗಿಲು ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೊಲೆಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಭಯೋತ್ಪಾದಕರಾದ ಮಹಮ್ಮದ್ ರಿಯಾಜ್ ಮತ್ತು ಮಹಮ್ಮದ್ಗೌಸ್ ಮುಸ್ಲಿಂ ಜಿಹಾದಿ ಮಾನಸಿಕತೆ ಹೊಂದಿ ದ್ವೇಷ ಭಾವನೆಯಿಂದ ಕೋಮು ಗಲಭೆ ಕೆರಳಿಸುವ ದುರುದ್ದೇಶದಿಂದ ಹಿಂದೂ ಸಮಾಜವನ್ನು ಭಯಭೀತಿಗೊಳಿಸುವ ದೃಷ್ಠಿಯಿಂದ ಈ ಕುಕೃತ್ಯ ಎಸಗಿದ್ದಾರೆ. ಈ ಇಬ್ಬರು ಕೊಲೆಗಾರರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಆದೇಶಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದನ್ನು ಇಡೀ ದೇಶ ಖಂಡಿಸುತ್ತದೆ. ಜೂ.೨೮ ರ ಮಂಗಳವಾರ ಮಧ್ಯಾಹ್ನ ರಾಜಸ್ಥಾನದ ಉದಯಪುರದ ಕನ್ನಯ್ಯಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಹಂತಕರು ಟೈಲರ್ ಕನ್ನಯ್ಯಲಾಲ್ ಅವರನ್ನು ಮೋಸದಿಂದ ಕೊಲೆ ಮಾಡಿದ್ದಾರೆ ಎಂದು ದೂರಿದರು.
ಮೊಹಮ್ಮದ್ಗೌಸ್ ಎಂಬುವವನು ಬಟ್ಟೆ ಅಳತೆ ಕೊಡುವ ನಾಟಕ ಆಡುತ್ತಿದ್ದನ್ನು ವೀಡಿಯೋ ಮಾಡುತ್ತಿದ್ದ ಮೊಹಮ್ಮದ್ ರಿಯಾಜ್, ಮೊಹಮ್ಮದ್ಗೌಸ್ ಎಂಬ ಮುಸ್ಲಿಂ ಜಿಹಾದಿ ತನ್ನ ಸೊಂಟದಲ್ಲಿ ಇಟ್ಟಿದ್ದ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ನಯ್ಯಲಾಲ್ ಕತ್ತಿಗೆ ಇರಿದಿರುವುದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಕನ್ನಯ್ಯಲಾಲ್ ಕೊಲೆ ಮಾಡಿದ ಮುಸ್ಲಿಂ ಜಿಹಾದಿಗಳು ಮತ್ತೆ ವೀಡಿಯೋ ಮಾಡಿ ಪ್ರವಾದಿ ಮೊಹಮ್ಮದ್ ಪರವಾಗಿ ನಾವು ಕೊಲೆ ಮಾಡಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಅಮಾಯಕ ಕನ್ನಯ್ಯಲಾಲ್ ತನ್ನ ದಿನನಿತ್ಯದ ದರ್ಜಿ ಕೆಲಸ ಮಾಡಿ ತನ್ನ ಕುಟುಂಬದ ಜೀವನ ನಿರ್ವಹಣೆ ನಡೆಸುತ್ತಿದ್ದ. ಯಾವ ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡದೆ ಕೇವಲ ನೂಪುರ ಶರ್ಮಾಗೆ ಬೆಂಬಲ ನೀಡಿ ಹಾಕಿದ ಪೋಸ್ಟ್ ಮತ್ತು ನೂಪುರ ಶರ್ಮಾ ಅವರ ಫೋಟೋ ವಾಟ್ಸಾಪ್ ಹಾಕಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಿರುವುದು ಭಯೋತ್ಪಾದಕ ಕೃತ್ಯವಾಗಿದೆ. ಈ ರೀತಿ ಮಾನಸಿಕತೆ ಐಸಿಸ್ ಉಗ್ರರ ಮಾನಸಿಕತೆ ಆಗಿದೆ ಎಂದು ಆರೋಪಿಸಿದರು.
ಇವರು ಐಸಿಸ್ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಸಾರ್ವಜನಿಕವಾಗಿ ಕತ್ತನ್ನು ಸೀಳುವ ಕೃತ್ಯ ನಡೆಸುತ್ತಿರುವುದು ಕೋಮು ಭಾವನೆ ಕೆರಳಿಸುವ ಮತ್ತು ಶಾಂತಿ ಕದಡುವ ದುರುದ್ದೇಶದಿಂದ ಮಾಡಿರುವ ಕನ್ಯಯ್ಯಲಾಲ್ ಹತ್ಯೆ ಇಡೀ ದೇಶದ ಜನತೆ ಭಯಭೀತಿಗೊಳಿಸುವ ರೀತಿ ಇದೆ. ಇಂತಹ ಅಸಹ್ಯ ಕೃತ್ಯ ಮಾಡಿರುವ ಮೊಹಮ್ಮದ್ಗೌಸ್ ಮತ್ತು ಮಹಮದ್ ರಿಯಾಜ್ ಇಬ್ಬರನ್ನು ಫಾಸ್ಟ್ಟ್ರಾಕ್ ಕೋರ್ಟ್ನಲ್ಲಿ ಶೀಘ್ರ ವಿಚಾರಣೆ ಮಾಡಿ ಇವರಿಗೂ ಸಹ ಗಲ್ಲು ಶಿಕ್ಷೆ ವಿಧಿಸಲು ಆದೇಶಿಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್, ಬಜರಂಗದಳ ಶಿವಮೊಗ್ಗ ವಿಭಾಗ ಸಂಚಾಲಕ್ ಪ್ರಭಜನ್, ಜಿಲ್ಲಾ ಸಂಚಾಲಕ ಸಂದೀಪ್, ಸಹ ಸಂಚಾಲಕ ಕೇಶವ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ವಿಠ್ಠಲ್, ಓಂಕಾರ್, ನಗರಾಧ್ಯಕ್ಷ ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಶಶಿಧರ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದ್ರಿನಾಥ್ ತಿಪ್ಪೇಸ್ವಾಮಿ, ಕಾರ್ಯಕರ್ತರಾದ ತೇಜು, ಅಖಿಲೇಶ್, ಮಂಜುನಾಥ್ ದೀಪಕ್, ಪ್ರಮೋದ್ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತಕ್ಕೆ ಬರುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು. ಕೆಲ ಸಮಯದ ನಂತರ ಬಿಡುಗಡೆ ಮಾಡಿದರು.