ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಹಿರಿಯ ಸಂತರು, ಪುರೋಹಿತರು, ದಾರ್ಶನಿಕರು ಮತ್ತು ಸಾಧುಗಳ ಕಲ್ಯಾಣಕ್ಕಾಗಿ “ಪುರೋಹಿತ ಕಲ್ಯಾಣ ಮಂಡಳಿ” ಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರದ ವೇಳೆ ತಾವು ಜನರಿಗೆ ನೀಡಿದ್ದ ವಚನವನ್ನು ಅತೀ ಶೀಘ್ರವಾಗಿ ಅನುಷ್ಠಾನಕ್ಕೆ ತಂದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ರಾಯ್ಬರೇಲಿಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಆದಿತ್ಯನಾಥ್, “ನಾವು ಅಧಿಕಾರಕ್ಕೇರಿದರೆ ಪುರೋಹಿತ್ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದ್ದರು. ಅಲ್ಲದೇ, ಎಲ್ಲಾ ಸಂಸ್ಕೃತ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಪ್ರಣಾಳಿಕೆಯಾದ ಲೋಕಕಲ್ಯಾಣ ಸಂಕಲ್ಪ ಪತ್ರದಲ್ಲಿ ಉಲ್ಲೇಖಿಸಿರುವ ಈ ಎಲ್ಲಾ ಭರವಸೆಗಳನ್ನು ಭರವಸೆಗಳನ್ನು ಈಡೇರಿಸುವ ಮೂಲಕ ಆದಿತ್ಯನಾಥ್ ತಮ್ಮ ವಚನದಂತೆ ನಡೆದುಕೊಂಡಿದ್ದಾರೆ. ಮಂಡಳಿ ಸ್ಥಾಪನೆ ಕುರಿತಾಗಿ ಯೋಗಿ ಸಚಿವ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಿದ್ದಾರೆ.
ಮುಂದಿನ 100 ದಿನಗಳೊಳಗೆ ರಾಜ್ಯದ ದೇವಾಲಯಗಳ ಕುರಿತಾಗಿ ಆನ್ಲೈನ್ ಮೂಲಕ ಸಮಗ್ರ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಯೋಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ವ್ಯವಸ್ಥೆ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗುವ ನಿರೀಕ್ಷೆಯಿದೆ.
ಈ ಆನ್ ಲೈನ್ ಕೈಪಿಡಿಯಲ್ಲಿ ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ದೇವಾಲಯದ ಮಾಹಿತಿ, ಅದರ ಇತಿಹಾಸ, ಮಾರ್ಗ ನಕ್ಷೆ ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿರುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ