ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶ ರಾಜ್ಯದ ಮಾಹಿತಿ ಹಕ್ಕು ಆಯೋಗವು ಆರ್ಟಿಐಗೆ ಉತ್ತರಿಸಲು ವಿಳಂಬ ಮಾಡಿದ ತಪ್ಪಿಗೆ ಅಧಿಕಾರಿಯೊಬ್ಬರಿಗೆ 250 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟ ಬಡಿಸುವ ಮಾಡುವ ಶಿಕ್ಷೆಯನ್ನು ನೀಡಿದೆ.
ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ನೂರ್ನಾ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆರ್ ಟಿಐ ಕಾಯ್ದೆಯಡಿ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ಭೂಪೇಂದ್ರ ಕುಮಾರ್ ಪಾಂಡೆ ಎಂಬುವವರು 2016 ರಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ ಗ್ರಾಮಾಭಿವೃದ್ಧಿ ಅಧಿಕಾರಿ ಮತ್ತು ನೂನ್ರಾ ಗ್ರಾಮದ ಪಿಐಒ ಚಂದ್ರಿಕಾ ಪ್ರಸಾದ್ ಅವರು ಈ ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಲಿಲ್ಲ. ಈ ಬಗ್ಗೆ ಪಾಂಡೆ ಸಲ್ಲಿಸಿದ ದೂರನ್ನು ಆಲಿಸಿದ ಉ.ಪ್ರ ಮಾಹಿತಿ ಆಯುಕ್ತ ಅಜಯ್ ಕುಮಾರ್ ಉಪ್ರೆತಿ ಅವರು ತಪ್ಪಿತಸ್ಥ ಅಧಿಕಾರಿ ಪ್ರಸಾದ್ ಗೆ ಏಪ್ರಿಲ್ 29 ರಂದು ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಬಡಿಸುವಂತೆ ಸೂಚಿಸಿದ್ದಾರೆ.
ಅಧಿಕಾರಿ ಮಕ್ಕಳಿಗೆ ಊಟ ಬಡಿಸುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆರ್ಟಿಐ ಕಾಯ್ದೆಯಡಿ ಮಾಹಿತಿ ನೀಡಲು ವಿಳಂಬ ಮಾಡುವುದಕ್ಕಾಗಿ 25,000 ನಗದು ದಂಡವನ್ನು ವಿಧಿಸಿದ್ದೇವೆ. ಮತ್ತು ಇಂತಹ ತಪ್ಪನ್ನು ಯಾವುದೇ ಅಧಿಕಾರಿ ಪುನಾವರ್ತಿಸಬಾರದು ಎಂಬ ಎಚ್ಚರಿಕೆಯನ್ನು ರವಾನಿಸಲು 250 ಮಕ್ಕಳಿಗೆ ಬಿಸಿಯೂಟ ಬಡಿಸುವ ಶಿಕ್ಷೆಯನ್ನು ಸಾಂಕೇತಿಕವಾಗಿ ನೀಡಲಾಗಿದೆ ಎಂದು ಉಪ್ರೆತಿ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ