ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶೃಂಗಾರ್ ಗೌರಿ ಮತ್ತು ಇತರ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಇಂದು ವಾರಾಣಸಿ ಕೋರ್ಟ್ ಮುಂದುವರೆಸಲಿದ್ದು ಇಂದು ಮಸೀದಿ ಆಡಳಿತ ಸಮಿತಿಯ (ಅಂಜುಮನ್ ಇಂತೇಝಾಮಿಯಾ ಮಸೀದಿ) ವಾದಗಳ ಮುಂದುವರೆದ ಭಾಗವನ್ನು ಆಲಿಸಲಿದೆ.
ಈ ಹಿಂದೆ ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ್ ಗೌರಿ ಮತ್ತು ಇತರ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಮಸೀದಿಯನ್ನು ಸರ್ವೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು ಈ ಕುರಿತು ಮಸೀದಿಯ ಆಡಳಿತ ಸಮಿತಿಯು 1991ರ ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಹಿರಿಯ ಜಿಲ್ಲಾ ನ್ಯಾಯಾಧೀಶರು ಆಲಿಸಬೇಕೆಂದು ಪ್ರಕರಣವನ್ನು ವರ್ಗಾವಣೆ ಮಾಡಿತ್ತು.
ಅದರಂತೆ ಮೇ 24ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಮುಸ್ಲಿಂ ಪರ ವಾದವನ್ನು ಆಲಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಅದರ ಮುಂದುವರಿದ ವಾದವನ್ನು ಕೋರ್ಟ್ ಆಲಿಸಲಿದೆ. ಅಲ್ಲದೇ ಜ್ಞಾನವಾಪಿ ಮಸೀದಿ ಸಮೀಕ್ಷೆಯ ವಿಡಿಯೋ ತುಣುಕಿನ ಸೋರಿಕೆಯನ್ನು ಕೂಡ ಪರಿಶೀಲಿಸಲಿದೆ ಎಂದು ಮೂಲಗಳು ವರದಿ ಮಾಡಿವೆ.