ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಹಲಗೂರು :
ಚಲಿಸುತ್ತಿದ್ದ ಸ್ಕೂಟರ್ ಚಕ್ರಕ್ಕೆ ಮಹಿಳೆಯ ದುಪ್ಪಟ್ಟ ಸಿಲುಕಿದ ಪರಿಣಾಮ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ ಮೂಲದ ಸುರಪುರ ತಾಲೋಕಿನ ಚಿಕ್ಕನಹಳ್ಳಿ ಗ್ರಾಮದ ಸುಬ್ಬಯ್ಯನ ಮಗ ಮೌನೇಶಪ್ಪ (32) ಮೃತ ದುರ್ದೈವಿ.
ಜೀವನ ನಿರ್ವಹಣೆಗಾಗಿ ಮೌನೇಶಪ್ಪ ಸಾವಂದಿಪುರ ಗ್ರಾಮದಲ್ಲಿ ಜೆಸಿಬಿ ಯಂತ್ರದ ಚಾಲಕನಾಗಿ ಆಗಿ ಕೆಲಸ ಮಾಡುತ್ತಿದ್ದನು. ಗರ್ಭಿಣಿ ಆಗಿದ್ದ ತನ್ನ ಪತ್ನಿ ರಾಯಮ್ಮನನ್ನು ವೈದ್ಯರ ಸಲಹೆಗಾಗಿ ಹಲಗೂರು ಆಸ್ಪತ್ರೆಗೆ ತೆರಳಿ ಸಾವಂದಿಪುರದ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ಹಿಂದೆ ಕುಳಿತಿದ್ದ ಪತ್ನಿಯ ದುಪ್ಪಟ್ಟ ಚಲಿಸುತ್ತಿದ್ದ ಸ್ಕೂಟರ್ ಚಕ್ರಕ್ಕೆ ಸಿಲುಕಿದ ಪರಿಣಾಮ ಅವಘಡ ಸಂಭವಿಸಿದೆ.
ರಾಯಮ್ಮನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.